Mysore
29
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳೂ ಹೆಚ್ಚುವರಿ ಬೆಲೆ ನೀಡಬೇಕು : ರಾಜ್ಯ ರೈತ ಸಂಘ ಆಗ್ರಹ

ಮೈಸೂರು : ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಎಫ್.ಆರ್.ಪಿ.ದರಕ್ಕೆ ಹೆಚ್ಚುವರಿ ಸೇರಿಸಿ ರೈತರ ಕಬ್ಬಿಗೆ ನೀಡುವಷ್ಟೇ ಹೆಚ್ಚುವರಿ ದರವನ್ನು ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳೂ ಹೆಚ್ಚುವರಿ ಬೆಲೆಯನ್ನು ನೀಡಬೇಕು ಎಂದು ರಾಜ್ಯ ರೈತ ಸಂಘ ಆಗ್ರಹಿಸಿದೆ.

ನ.೮ರ ರಾಜ್ಯ ಸರ್ಕಾರದ ನಡಾವಳಿಗಳು ದಕ್ಷಿಣ ಭಾಗದ ಕಾರ್ಖಾನೆಗಳಿಗೂ ಅನ್ವಯವಾಗಲಿದೆ. ಹಾಗಾಗಿ ಉತ್ತರ ಕರ್ನಾಟಕ ಭಾಗದ ಕಾರ್ಖಾನೆಗಳ ರೀತಿಯಲ್ಲೇ ಈ ಭಾಗದ ಜಿಲ್ಲೆಗಳ ಕಬ್ಬುಬೆಳೆಗಾರರಿಗೆ ನೀಡಬೇಕು. ಈ ಕುರಿತಂತೆ ಈ ಭಾಗದ ಎಲ್ಲ ಡಿಸಿಗಳು ರೈತರು, ಕಾರ್ಖಾನೆ ಮಾಲೀಕರ ಸಭೆ ನಡೆಸಿ ಕಾರ್ಖಾನೆಗಳು ಹೆಚ್ಚುವರಿ ಬೆಲೆ ಪಾವತಿಸಲು ಸೂಕ್ತ ತೀರ್ಮಾನ ಮಾಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾಜ್ಯ ಸರ್ಕಾರ ಎಸ್‌ಎಪಿ ನೀತಿಯನ್ನು ಜಾರಿಗೆ ತರಲು ಅಧಿನಿಯಮಕ್ಕೆ ತಿದ್ದುಪಡಿ ತಂದು ಈ ಅಧಿನಿಯಮವನ್ನು ಮತ್ತಷ್ಟು ಬಲಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಇದನ್ನೂ ಓದಿ:-ಕನ್ನಡಗರು ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಬಾರದು : ಪ್ರೊ.ಎನ್.ಎಂ.ತಳವಾರ್‌ ಸಲಹೆ

ಇನ್ನು ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿಗೆ ೧೦.೨೫ ಇಳುವರಿ ಮಾನದಂಡ ಮಾಡಿರುವುದು ಸರಿಯಲ್ಲ. ಇದನ್ನು ಕೂಡಲೇ ೯.೫ಕ್ಕೆ ಇಳಿಸಬೇಕು. ಎಥೆನಾಲ್ ಉತ್ಪಾದನೆಗೆ ಈಗ ನೀಡಿರುವ ಅವಕಾಶ ಕಡಿಮೆ ಇದ್ದು, ಅದನ್ನು ಹೆಚ್ಚು ಮಾಡಬೇಕು. ಎಥೆನಾಲ್ ಮಾರಾಟಕ್ಕೆ ಮಿತಿ ಹೇರಿರುವುದರಿಂದಾಗಿ ಕಾರ್ಖಾನೆಗಳಿಗೆ ತೊಂದರೆ ಆಗಲಿದೆ. ಸಕ್ಕರೆ ರಫ್ತನ್ನು ರೈತರು ಮತ್ತು ಕಾರ್ಖಾನೆ ಹಿತದೃಷ್ಟಿಯಿಂದ ಹೆಚ್ಚಿಸಬೇಕೆಂದರು.
ಸಕ್ಕರೆ ವಿಷಯ ಕುರಿತಂತೆ ಕೇಂದ್ರದ ನೀತಿಯಲ್ಲಿ ಬದಲಾವಣೆ ಆಗಲೇಬೇಕೆಂದು ಆಗ್ರಹಿಸಿ ಸದ್ಯದಲ್ಲೇ ಕೇಂದ್ರ ಆಹಾರ ಮತ್ತು ನಾಗರಿಕ ಸೇವೆ ಸಚಿವ ಪ್ರಹ್ಲಾದ್ ಜೋಷಿ ಅವರ ಧಾರವಾಡದ ಮನೆಗೆ ಮುತ್ತಿಗೆ ಹಾಕಲು ಸಂಘ ಚಿಂತನೆ ನಡೆಸಿದ್ದು, ಸದ್ಯದಲ್ಲೇ ಈ ತೀರ್ಮಾನವನ್ನು ಪ್ರಕಟಿಸಲಾಗುವುದೆಂದರು.

ಇನ್ನು, ಸರಗೂರು ತಾಲ್ಲೂಕಿನಲ್ಲಿ ಒಂದೇ ತಿಂಗಳಲ್ಲಿ ಮೂವರು ಹುಲಿಗೆ ಬಲಿಯಾಗಿದ್ದಾರೆ. ಈ ಸಂಬಂಧ ಸರ್ಕಾರ ಅಽಕಾರಿಗಳ ಸಭೆ ನಡೆಸಿದ್ದನ್ನು ಬಿಟ್ಟರೆ ಗಂಭೀರ ಕ್ರಮ ಕೈಗೊಂಡಿಲ್ಲ. ಸರ್ಕಾರ ಕಾಡಂಚಿನ ಪ್ರದೇಶದ ವಾಸಿಗಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕು. ಹುಲಿ ಮತ್ತು ಆನೆ ಹಾವಳಿಯನ್ನು ತಪ್ಪಿಸಬೇಕು. ಇಲ್ಲದಿದ್ದಲ್ಲಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.

Tags:
error: Content is protected !!