ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ ಘಟನೆಯ ಸ್ಥಳಕ್ಕೆ ಭಾನುವಾರ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ನೇಮಕಗೊಂಡಿರುವ ತನಿಖಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿತು. ಈ ವೇಳೆ ಕಾವೇರಿ ವನ್ಯಜೀವಿಧಾಮದ ಪ್ರಭಾರ ಡಿಸಿಎಫ್ ಮರಿಸ್ವಾಮಿ, ಹನೂರು ತಹಶೀಲ್ದಾರ್ ಚೈತ್ರ, ಇನ್ಸ್ಪೆಕ್ಟರ್ಗಳಾದ ರವೀಂದ್ರ ಚಿಕ್ಕರಾಜ ಶೆಟ್ಟಿ, ಕಂದಾಯ ನಿರೀಕ್ಷಕ ನಿರಂಜನ್, ಗ್ರಾಮ ಆಡಳಿತಾಧಿಕಾರಿ ಶೇಷಣ್ಣ ಅವರು ಕೂಡ ತನಿಖಾ ತಂಡದ ಜೊತೆಗಿದ್ದರು.
ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಘಟನೆಯ ಬಗ್ಗೆ ಸ್ವವಿವರವಾದ ಮಾಹಿತಿಯನ್ನು ಪಡೆದುಕೊಂಡರು. ಘಟನೆ ನಡೆದ ಸ್ಥಳ, ವಶಪಡಿಸಿಕೊಂಡ ಸಾಕ್ಷ್ಯಗಳು ಮತ್ತು ಇತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.



