ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಚಿತ್ರರಂಗದ ಮರೆಯಲಾಗದ ನಟ ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಅಪ್ಪು ಹೆಸರಿನಲ್ಲಿ ಎಂಟು ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಚಾಲನೆ ನೀಡಿದರು. 11.45ರ ಶುಭ ಮುಹೂರ್ತದಲ್ಲಿ ಅಪ್ಪು ಭಾವಚಿತ್ರದ ಮುಂದೆ ಎಂಟು ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಪುನೀತ್ ರಾಜ್ಕುಮಾರ್ ಸಮಾಜ ಸೇವಾ ಸಮಿತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹಯಲ್ಲಿ ಸಮಿತಿ ವತಿಯಿಂದಲೇ ವಧು ವರರಿಗೆ ತಾಳಿ, ಸೀರೆ, ಪಂಚೆ, ಕಾಲುಂಗುರ ವಿತರಣೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಪುತ್ರಿ ಲಕ್ಷ್ಮೀ ಅವರ ಮಗ ಷಣ್ಮುಖ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದರು.
ನವ ಜೀವನಕ್ಕೆ ಕಾಲಿಟ್ಟ ಜೋಡಿಗಳು ಮಾತನಾಡಿ, ನಮಗೆಲ್ಲಾ ಅಪ್ಪು ದಂಪತಿಯಂತೆ ಬದುಕಬೇಕು ಎನ್ನುವ ಆಸೆಯಿದೆ. ಅಪ್ಪು ಅವರು ನಮಗೆ ಆದರ್ಶದ ವ್ಯಕ್ತಿ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಜೀವನ ಮಾಡುತ್ತೇವೆ. ಅವರು ಇಲ್ಲದಿದ್ದರೂ ಅವರ ಆಶೀರ್ವಾದ ನಮಗೆ ಇದೆ ಎಂದು ಭಾವಿಸುತ್ತೇವೆ. ಅವರಂತೆ ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.