ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಆದಷ್ಟು ಬೇಗ ಬಿಡುಗಡೆ ಆಗಬೇಕೆಂದು ಅವರ ಪತ್ನಿ ವಿಜಯಲಕ್ಷ್ಮೀ ಕೊಲ್ಲೂರಿನಲ್ಲಿ ನವಚಂಡಿಕಾ ಹೋಮವನ್ನು ಮಾಡಿಸಿದ್ದಾರೆ.
ತಮ್ಮ ಪುತ್ರ ವಿನೀಷ್ ಹಾಗೂ ಸಂಬಂಧಿಗಳ ಜೊತೆಗೆ ಕೊಲ್ಲೂರಿಗೆ ಹೋದ ವಿಜಯಲಕ್ಷ್ಮೀ, ಶುಕ್ರವಾರ ನರಸಿಂಹ ಅಡಿಗರ ನೇತೃತ್ವದಲ್ಲಿ ನವಚಂಡಿಕಾಯಾಗ ಮಾಡಿಸಿದ್ದಾರೆ. ನಂತರ ದೇವಿಗೆ ಫಲಪುಷ್ಪ ಮತ್ತು ರೇಷ್ಮೆ ಸೀರಿಯನ್ನು ಸಲ್ಲಿಸಿ, ಸಂಕಲ್ಪ ಮಾಡಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಈ ಚಂಡಿಕಾಯಾಗದಿಂದ ದುಷ್ಟ ಶಕ್ತಿಗಳು ದೂರವಾಗುತ್ತದೆ ಮತ್ತು ಸಕರಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆಯಿಂದ ಮಾಡಿಸಲಾಗುತ್ತದೆ. ಇದರಿಂದ ಶತ್ರು ಬಾಧೆ ನಿವಾರಣೆಯಾಗುವುದರ ಜೊತೆಗೆ ಆರೋಗ್ಯ ಹಾಗೂ ಸಂಪತ್ತು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.
ಇದಕ್ಕೂ ಮೊದಲು ವಿಜಯಲಕ್ಷ್ಮೀ ದರ್ಶನ್ ಅವರು ನಿರ್ದೇಶಕ ಪ್ರೇಮ್ ಜೊತೆಗೂಡಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಲವು ದರ್ಶನ್ ಬಂಧನಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆನ್ನಲಾಗಿದೆ.
ಇದಕ್ಕೂ ಮೊದಲು ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದ ವಿಜಯಲಕ್ಷ್ಮೀ, ಮೃತ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದರು. ಅಷ್ಟೇ ಅಲ್ಲ, ತಾಯಿ ಚಾಮುಂಡೇಶ್ವರಿ ಮತ್ತು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇರುವುದಾಗಿ ಹೇಳಿದ್ದರು.
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದೆ. ದರ್ಶನ್ ಸೇರಿದಂತೆ ಒಟ್ಟು 17 ಆರೋಪಿಗಳು ಕಳೆದ ಒಂದು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪೈಕಿ ದರ್ಶನ್ ಸೇರಿದಂತೆ 14 ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, ನಾಲ್ವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಇವರೆಲ್ಲರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನ ಅಂದರೆ ಆಗಸ್ಟ್ 1ರವರೆಗೂ ವಿಸ್ತರಣೆ ಮಾಡಿದೆ.