ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರವು ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ಶ್ರೀಮುರಳಿ ಅಭಿನಯದ ಯಾವೊಂದು ಚಿತ್ರವೂ ಸೆಟ್ಟೇರಿಲ್ಲ. ಹಾಗೆಯೇ, ಅವರ ಮುಂದಿನ ಚಿತ್ರ ಯಾವುದು ಎಂಬುದರ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ. ಇದೀಗ ಮುರಳಿ ಅಭಿನಯದ ಹೊಸ ಚಿತ್ರದ ಘೋಷಣೆ ಕೊನೆಗೂ ಆಗಿದೆ.
ಇತ್ತೀಚೆಗಷ್ಟೇ, ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರವನ್ನು ನಿರ್ಮಿಸಿದ್ದ ಜಯರಾಮ್ ದೇವಸಮುದ್ರ, ತಮ್ಮ ಸುರಮ್ ಮೂವೀಸ್ ಲಾಂಛನದಲ್ಲಿ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಪುನೀತ್ ರುದ್ರನಾಗ್ ನಿರ್ದೇಶನ ಮಾಡುತ್ತಿರುವ ಈ ಹೊಸ ಚಿತ್ರದಲ್ಲಿ ಶ್ರೀಮುರಳಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, 500 ವರ್ಷಗಳ ಹಿಂದಿನ ಕಥೆ ಇದಾಗಿದೆ. ನವೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಇದನ್ನೂ ಓದಿ:-ನಂಜನಗೂಡು: ಪೆಟ್ರೋಲ್ ಹಾಕಿಸ್ಕೊಂಡು ಹಣ ಕೊಡದೆ ಯುವಕರು ಪರಾರಿ
ಪುನೀತ್ ಇದಕ್ಕೂ ಮೊದಲು ಯುವ ಅಭಿನಯದ ಮೊದಲ ಚಿತ್ರ ‘ಯುವ ರಣಧೀರ ಕಂಠೀರವ’ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಕಾರಣಾಂತರಗಳಿಂದ ಚಿತ್ರ ಸೆಟ್ಟೇರಲಿಲ್ಲ. ಆ ನಂತರ ಅವರು ‘ಕೆಜಿಎಫ್ಟ್ – ಚಾಪ್ಟರ್ 2’, ‘ಬಘೀರ’, ‘ಎಕ್ಕ’, ‘ವೀರ ಚಂದ್ರಹಾಸ’ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ಜಯರಾಮ್, ‘’ನಿದ್ರಾದೇವಿ next door’ ಚಿತ್ರಕ್ಕೆ ಎಲ್ಲರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ. ಈಗ ನಮ್ಮ ಸಂಸ್ಥೆಯಿಂದ ಇನ್ನೊಂದು ಹೊಸ ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದೆ. ಇದುವರೆಗೂ ಮಾಡಿರದ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಳ್ಳಲಿದ್ದಾರೆ. ಪುನೀತ್ ರುದ್ರನಾಗ್ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಂಕೇತ್ ಛಾಯಾಗ್ರಹಣ, ನಿರ್ಮಲ್ ಕುಮಾರ್ ವಿ.ಎಫ್.ಎಕ್ಸ್ ಹಾಗೂ ಅಮರ್ ಅವರ ಕಲಾ ನಿರ್ದೇಶನವಿರುವ ಈ ನೂತನ ಚಿತ್ರಕ್ಕೆ ರಾಮು ಅವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.





