‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಇದೀಗ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಅಂದಹಾಗೆ, ಚಿತ್ರತಂಡದವರು ಮೇ.23ರಂದು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ. ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗಿದೆ. ಸಾಲುಮರದ ತಿಮ್ಮಕ್ಕ ಹಾಡು ಬಿಡುಗಡೆ ಮಾಡಿದರೆ, ಹಿರಿಯ ನಟ ಎಂ.ಎಸ್. ಉಮೇಶ್, ಕರಿಸುಬ್ಬು, ಮಡೆನೂರು ಮನು, ಮೌನಾ ಗುಡ್ಡೆಮನೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
‘ಕುಲದಲ್ಲಿ ಕೀಳ್ಯಾವುದೋ’ ಶೀರ್ಷಿಕೆ ಗೀತೆಯನ್ನು ನಿರ್ದೇಶಕ ರಾಮನಾರಾಯಣ್ ಬರೆದಿದ್ದು, ಚೇತನ್ ಸೋಸ್ಕಾ ಹಾಡಿದ್ದಾರೆ. ಇನ್ನು, ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಮೊದಲು ಯೋಗರಾಜ್ ಭಟ್ ಬರೆಯಬೇಕಿತ್ತಂತೆ. ‘ಭಟ್ ಅವರು ‘ಮನದ ಕಡಲು’ ಚಿತ್ರದ ಕೆಲಸದಲ್ಲಿದ್ದು. ಅವರನ್ನು ಹಿಡಿಯೋದೇ ಕಷ್ಟವಾಗಿತ್ತು. ನಮ್ಮದು ಚಿತ್ರೀಕರಣ ಮುಗಿಯುತ್ತಾ ಬಂದಿತ್ತು. ಹೆಚ್ಚು ಸಮಯವಿರಲಿಲ್ಲವಾದ್ದರಿಂದ ಇನ್ನು ಕಾಯಬೇಡಿ, ನೀವೇ ಬರೆದುಕೊಂಡು ಬಿಡಿ ಎಂದರು. ಅದೊಂದು ಸವಾಲಿನ ಕೆಲಸವಾಗಿತ್ತು. ಏನು ಬರೆದರೂ ಸಮಾಧಾನವಾಗುತ್ತಿರಲಿಲ್ಲ. ಅಷ್ಟರಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ರೆಸ್ಟ್ರೂಮ್ಗೆ ಹೋಗಿ ಬಂದರು. ತಕ್ಷಣವೇ ಒಂದು ಟ್ಯೂನ್ ಕೊಟ್ಟರು. ಒಂದೆರಡು ಸಾಲುಗಳನ್ನು ಬರೆದೆ. ಅದನ್ನು ಎಲ್ಲರೂ ಇಷ್ಟಪಟ್ಟರು. ಬರೆಯುತ್ತಾ ಬರೆಯುತ್ತಾ ಹಾಡು ಪೂರ್ಣವಾಯಿತು. ಈ ಹಾಡು ಎಲ್ಲರ ಮನಸ್ಸಿನಲ್ಲಿ ಉಳಿಯುತ್ತದೆ ಎಂಬ ನಂಬಿಕೆ ಇದೆ’ ರಾಮನಾರಾಯಣ್ ಹೇಳಿದರು.
ಯೋಗರಾಜ್ ಭಟ್ ಮಾತನಾಡಿ, ‘ಇದೊಂದು ಬಿಟ್ಟು ಬೇರೆ ಹಾಡುಗಳನ್ನು ನಾನು ಬರೆದಿದ್ದೇನೆ. ಎಲ್ಲಾ ನಾನೇ ಬರೆದರೆ ಒನ್ಸೈಡೆಡ್ ಆಗಿ ಬಿಡುತ್ತದೆ ಎಂದೆನಿಸಿತ್ತು. ಹಾಗಾಗಿ, ಈ ಹಾಡನ್ನು ರಾಮನಾರಾಯಣ್ ಅವರಿಗೇ ಬರೆಯೋಕೆ ಹೇಳಿದೆ. ಬಹಳ ಚೆನ್ನಾಗಿ ಬರೆದಿದ್ದಾರೆ. ಈ ಹಾಡಿನಲ್ಲೂ ಅಭಿನಯಿಸಿದ್ದೇನೆ’ ಎಂದರು.
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವನ್ನು ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮಡೆನೂರು ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲ ನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ.





