ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಗುರುವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಉತ್ಸವದ ಉದ್ಘಾಟನೆ ಆಗಲಿದೆ. ಮಾರನೇ ದಿನದಿಂದ ರಾಜಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘ ಮತ್ತು ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಚಿತ್ರ ಸಮಾಜ ಇಲ್ಲಿ ಚಿತ್ರೋತ್ಸವದ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಸಮಕಾಲೀನ ವಿಶ್ವ ಸಿನಿಮಾ ವಿಭಾಗದಲ್ಲಿ ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಉಕ್ರೇನ್, ಹಾಂಕಾಂಗ್, ಬೆಲ್ಜಿಯಂ, ನೆದರ್ಲೆಂಡ್, ಫಿನ್ಲೆಂಡ್, ಕ್ರೋಷಿಯಾ, ಇರಾನ್, ಚೀನಾ, ಸ್ವಿಟ್ಜರ್ಲೆಂಡ್, ಪ್ಯಾಲೆಸ್ಟೆನ್, ಅರ್ಜಂಟೈನಾ, ಸಿಂಗಾಪೂರ್, ಡೆನ್ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ಲೆಬನಾನ್, ಪೋಲೆಂಡ್, ರೊಮಾನಿಯಾ, ಕಾಂಬೊಡಿಯಾ, ಕೆನಡಾ, ಜಪಾನ್, ಸೆನೆಗಲ್, ಸ್ಪೈನ್, ಸೈಪ್ರಸ್, ಇಂಡೋನೇಶಿಯಾ, ಇಟಲಿ ಸೇರಿದಂತೆ ೫೦ಕ್ಕೂ ದೇಶಗಳ ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆ. ಈ ಬಾರಿಯ ಆಸ್ಕರ್ ಪ್ರವೇಶ ಪಡೆದಿದ್ದ ಚಿತ್ರಗಳೂ ಈ ಸಾಲಿನಲ್ಲಿವೆ.
ಅಂತಾರಾಷ್ಟ್ರೀಯ ವಿಮರ್ಶಕರ ಸಂಘಟನೆ ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ನೀಡಿದ ಏಳು ಚಿತ್ರಗಳು ವಿಮರ್ಶಕರ ವಾರ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆ. ಪುನರಾವಲೋಕನ ವಿಭಾಗದಲ್ಲಿ ಆಫ್ರಿಕನ್ ಸಿನಿಮಾದ ಪಿತಾಮಹ ಎಂದೇ ಕರೆಯಲಾಗುವ, ಔಸ್ಮಾನ್ ಸೆಂಬೆನೆ ಅವರ ಚಲನಚಿತ್ರಗಳಿರುತ್ತವೆ. ಭಾರತದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ಸಿನಿಮಾವಲೋಕನ ಇರಲಿದೆ. ಇಬ್ಬರದೂ ಇದು ಶತಮಾನೋತ್ಸವ ವರ್ಷ.
ದೇಶಕೇಂದ್ರಿತ ವಿಭಾಗದಲ್ಲಿ ಈ ಬಾರಿ ದಕ್ಷಿಣ ಕೊರಿಯಾದ ಚಿತ್ರಗಳತ್ತ ಗಮನ ನೀಡಲಾಗಿದೆ. ನಿರ್ದೇಶಕರೊಬ್ಬರ ಅಧ್ಯಯನಕ್ಕೆ ಹಾಂಗ್ಕಾಂಗ್ನ ವಾಂಗ್ಕರ್ ವೈ ಅವರ ಚಿತ್ರಗಳಿವೆ.
ಚಲನಚಿತ್ರ ಉದ್ಯಮ ಮತ್ತು ಮಾಧ್ಯಮಗಳ ಆಸಕ್ತಿಗೆ ಚಿತ್ರೋತ್ಸವದ ದಿನಗಳಲ್ಲಿ ಪ್ರತಿದಿನ ತಜ್ಞರಿಂದ ಸಂವಾದ, ಉಪನ್ಯಾಸ, ಮಾಸ್ಟರ್ಕ್ಲಾಸ್ ಮೊದಲಾದ ಕಾರ್ಯಕ್ರಮಗಳಿರುತ್ತವೆ. ಅವುಗಳಲ್ಲಿ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ಕುರಿತಂತೆ ಖ್ಯಾತ ನಿರ್ದೇಶಕ, ಛಾಯಾಗ್ರಾಹಕ, ನಿರ್ಮಾಪಕ ಗೋವಿಂದ ನಿಹಲಾನಿ ಮಾತನಾಡಲಿದ್ದಾರೆ. ಚಿತ್ರಕಥೆಯ ಕುರಿತಂತೆ ಬಾಹುಬಲಿ ಮತ್ತು ಆರ್ಆರ್ಆರ್ ಚಿತ್ರಗಳ ವಿಜಯೇಂದ್ರ ಪ್ರಸಾದ್, ಸಿನಿಮಾದಲ್ಲಿ ದೃಶ್ಯ ಸಾದೃಶ್ಯದ ಕುರಿತಂತೆ ಶ್ರೀಲಂಕಾದ ಚಲನಚಿತ್ರ ನಿರ್ದೇಶಕ, ವಿಮರ್ಶಕ ವಿಮುಕ್ತಿ ಜಯಸುಂದರ ಅವರಿಂದ ಮಾಸ್ಟರ್ ಕ್ಲಾಸ್ಗಳಿರುತ್ತವೆ. ಚಲನಚಿತ್ರಗಳ ಕೃತಿ ಸ್ವಾಮ್ಯ ಕುರಿತಂತೆ ಎಂ.ಎಸ್.ಭರತ್, ಜಿ.ಕೆ.ತಿರುನಾವುಕ್ಕರಸು ಉಪನ್ಯಾಸ/ಚರ್ಚೆ, ಇರಾನಿನ ಖ್ಯಾತ ನಿರ್ದೇಶಕ ಜಾಫರ್ ಪನಾಹಿ ಪುತ್ರ ಲೇಖಕ ಮತ್ತು ನಿರ್ದೇಶಕ ಪನಾ ಪನಾಹಿ ಅವರಿಂದ ಮಾಸ್ಟರ್ ಕ್ಲಾಸ್, ಮೆಟಾವರ್ಸ್, ಛಾಯಾಗ್ರಹಣ, ಶಬ್ದವಿನ್ಯಾಸಗಳ ಕುರಿತಂತೆ ತಜ್ಞರಿಂದ ಉಪನ್ಯಾಸ, ನಿರ್ದೇಶಕ, ನಟ ರಿಷಭ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ಕಿರಂಗದೂರ್ಅವರೊಂದಿಗೆ ಸಂವಾದ ಇವುಗಳಲ್ಲಿ ಸೇರಿವೆ.
ವಿ.ಕೆ. ಮೂರ್ತಿ ಅವರದು ಮಾತ್ರವಲ್ಲದೆ, ಕನ್ನಡ ಚಿತ್ರೋದ್ಯಮ ಪ್ರಮುಖರ ಜನ್ಮಶತಮಾನೋತ್ಸವವೂ ಇದೇ ವರ್ಷ. ಅವರಲ್ಲಿ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಚಲನಚಿತ್ರಜ್ಞ ಎಂ.ವಿ.ಕೃಷ್ಣಸ್ವಾಮಿ (ಎಂವಿಕೆ), ಕನ್ನಡ ಚಿತ್ರರಂಗದಲ್ಲಿ ಹಾಸ್ಯಪಾತ್ರಧಾರಿಯಾಗಿ ಮೆರೆದ ನರಸಿಂಹರಾಜು, ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಇವರು ಈ ಮೂವರು. ಈ ಮೂವರ ಕುರಿತಂತೆ ಶತಮಾನೋತ್ಸವ ಸ್ಮರಣೆಯ ಚರ್ಚೆ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಅಂತಾರಾಷ್ಟ್ರೀಯ ಖ್ಯಾತಿವೆತ್ತ ಎಂವಿಕೆಯವರು 1949ರಲ್ಲಿ ತೆರೆಕಂಡ ‘ಭಾರತಿ’ ಚಿತ್ರದ ಮುಖ್ಯ ಪಾತ್ರಧಾರಿ. ಮೊದಲು ನಟರಾಗಿ, ನಂತರ ಪ್ಯಾರಿಸ್, ಲಂಡನ್ ಮತ್ತು ರೋಮ್ಗಳಲ್ಲಿ ಚಲನಚಿತ್ರ ಕಲೆ, ತಂತ್ರಜ್ಞಾನಗಳ ಕುರಿತಂತೆ ತರಬೇತಿ ಪಡೆದರಷ್ಟೇ ಅಲ್ಲದೆ, ವಿಶ್ವಖ್ಯಾತಿ ಪಡೆದ ರಾಬರ್ಟ್ ರೋಸೆಲಿನಿ, ಬರ್ಗ್ಮನ್ ಮುಂತಾದವರ ಜೊತೆ ಕೆಲಸ ಮಾಡಿದವರು. ಕನ್ನಡದಲ್ಲಿ ‘ಪಾಪ ಪುಣ್ಯ’ ಮತ್ತು ‘ಸುಬ್ಬಾಶಾಸ್ತ್ರೀ’ ಚಿತ್ರಗಳನ್ನು ನಿರ್ದೇಶಿಸಿದ ಎಂವಿಕೆ ಸಾಕ್ಷ ಚಿತ್ರಗಳ ನಿರ್ದೇಶನದಲ್ಲಿ ಹೆಸರಾದವರು. ವಿಶ್ವೇಶ್ವರಯ್ಯನವರದೂ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೇಂದ್ರ ಸರ್ಕಾರದ ಫಿಲಂ ಡಿವಿಜನ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ಸೆನ್ಸಾರ್ ಮಂಡಳಿ, ಚಲನಚಿತ್ರೋತ್ಸವ ನಿರ್ದೇಶನಾಲಯ, ಭಾರತದ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಕೇಂದ್ರಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ ಎಂವಿಕೆ ಅವರಿಗೆ ಸಾಕ್ಷ ಚಿತ್ರ ಲೋಕದ ಅತಿ ಉನ್ನತ ಪ್ರಶಸ್ತಿಯಾದ ಎಜ್ರಾ ಮೀರ್ ಪ್ರಶಸ್ತಿ ಪುರಸ್ಕೃತರು. ನರಸಿಂಹರಾಜು, ಎಂವಿಕೆ ಮತ್ತುಚಾರಿ ಅವರ ಕುರಿತಂತೆ ಮಾತುಕತೆ ಮಾತ್ರ ಇದೆ.
ಈ ಬಾರಿ ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಕಂದಾಯ ಸಚಿವ ಆರ್.ಅಶೋಕ್ ಅವರಿದ್ದಾರೆ. ಸಂಘಟನಾ ಸಮಿತಿಯ ಮೊದಲ ಪತ್ರಿಕಾಗೋಷ್ಠಿಯ ವೇಳೆ ಅವರು, ಈ ಚಿತ್ರೋತ್ಸವದಲ್ಲಿ ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’ ಮುಂತಾದ ಕನ್ನಡದ ಹಳೆಯ ಚಿತ್ರಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸುವುದಾಗಿ ಪ್ರಕಟಿಸಿದ್ದರು. ಅವರ ಆದೇಶದ ಕಾರಣ ಇರಬೇಕು, ಕನ್ನಡದ ಹಲವು ಹಳೆಯ ಚಿತ್ರಗಳನ್ನು ಭಾರತದ ಮಹಾನ್ ಚಿತ್ರಗಳ ಮರುನೋಟ ವಿಭಾಗದಲ್ಲಿ ಸೇರಿಸಲಾಗಿದೆ. ಶ್ರೀ ಕೃಷ್ಣದೇವರಾಯ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ ,ಜನುಮದ ಜೋಡಿ, ಬೂತಯ್ಯನ ಮಗ ಅಯ್ಯು, ಅಮೆರಿಕ ಅಮೆರಿಕ ಚಿತ್ರಗಳ ಸತ್ಯಜಿತ್ರೇ ಅವರ ಪ್ರತಿಧ್ವನಿ, ಅರವಿಂದನ್ರ ತಂಪ್, ೧೯೩೬ರ ಮರಾಠಿ ಚಿತ್ರ ಸಂತ್ ತುಕಾರಾಮ್ ಮುಂತಾದ ಚಿತ್ರಗಳಿವೆ. ಭಾರತೀಯ ಮಹಾನ್ ಚಿತ್ರಗಳನ್ನು ಆಯ್ಕೆ ಮಾಡುವಾಗ ಕನ್ನಡದ ಆರು ಚಿತ್ರಗಳ ಆಯ್ಕೆಯನ್ನು ಪ್ರಶ್ನಿಸಲಾಗುತ್ತಿದೆ.
ಸಮಕಾಲೀನ ಭಾರತೀಯ ಚಿತ್ರಗಳ ಪನೋರಮಾ ವಿಭಾಗದಲ್ಲಿರುವ ಹತ್ತು ಚಿತ್ರಗಳಲ್ಲಿ ಕಿಟ್ಟೆಲ್ ಕುರಿತ ಸಾಕ್ಷ ಚಿತ್ರ’ದ ವರ್ಡ್ ಎಂಡ್ ದ ಟೀಚರ್’, ‘ಅತ್ತಿಹಣ್ಣು ಮತ್ತುಕಣಜ’ ಮತ್ತು ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಚಿತ್ರಗಳಿವೆ. ಜನಪ್ರಿಯ ಚಿತ್ರಗಳ ಸ್ಪರ್ಧೆ ಈ ಬಾರಿ ಇಲ್ಲ. ಅದರ ಬದಲು, ವಾಣಿಜ್ಯ ಮಂಡಳಿ ಆಯ್ಕೆ ಮಾಡಿರುವ ಕಳೆದ ವರ್ಷದ ಹತ್ತು ಜನಪ್ರಿಯ ಚಿತ್ರಗಳು ಪ್ರದರ್ಶನಕ್ಕಿವೆ. ಅವು ಗಂಧದಗುಡಿ, 777 ಚಾರ್ಲಿ, ಕೆಜಿಎಫ್ ಚಾಪ್ಟರ್ 2, ವಿಕ್ರಾಂತ್ ರೋಣ, ಕಾಂತಾರ, ವೇದ, ಗಾಳಿಪಟ 2, ಹೆಡ್ಬುಷ್, ಬೈ ಟು ಲವ್ ಮತ್ತು ತುಳು ಚಿತ್ರರಾಜ್ ಸೌಂಡ್ಸ್ – ಲೈಟ್ಸ್.
ಚಿತ್ರೋತ್ಸವದ ಸಿದ್ಧತೆ ತಡವಾಗಿ ಆರಂಭವಾಗಿರುವುದರಿಂದ ಚಿತ್ರಗಳ ಆಯ್ಕೆಗೂ ಸಾಕಷ್ಟು ಕಾಲಾವಕಾಶ ಇರಲಿಲ್ಲ. ಏಷ್ಯಾ ವಿಭಾಗದ ಸ್ಪರ್ಧೆಗೆ ಸಾಕಷ್ಟು ಚಿತ್ರಗಳು ಬರಬೇಕಾದರೆ, ಅದಕ್ಕೆ ಅರ್ಜಿ ಸಲ್ಲಿಸಲು ಪ್ರಕಟಣೆ ನೀಡಿ ಸಾಕಷ್ಟು ಕಾಲಾವಕಾಶ ಬೇಕಿತ್ತು. ಬಂದಿರುವ ಚಿತ್ರಗಳ ಸಂಖ್ಯೆ ಸಹಜವಾಗಿಯೇ ಕಡಿಮೆ ಇರಬೇಕು. ಕನ್ನಡದ ಮೂರು ಚಿತ್ರಗಳು ಏಷ್ಯಾ ವಿಭಾಗದಲ್ಲಿ ಸ್ಪರ್ಧೆಯಲ್ಲಿವೆ. ಇನ್, ಸಿಗ್ನಲ್ ಮ್ಯಾನ್ 1971 ಮತ್ತು ವಿರಾಟಪುರ ವಿರಾಗಿ ಈ ಚಿತ್ರಗಳು. ಭಾರತದ ಚಿತ್ರಗಳ ಸ್ಪರ್ಧೆಯಲ್ಲೂ ಅಷ್ಟೇ. ಅಲ್ಲಿನ ಹದಿನಾಲ್ಕು ಚಿತ್ರಗಳಲ್ಲಿ ಆರು ಕರ್ನಾಟಕದವು! ಆರಾರಿರಾರೊ, ಕೋಳಿ ಎಸ್ರು, ಅಣ್ಣ, ಮಾವು ಬೇವು, ತನುಜಾ ಮತ್ತುಕೌಡಿ ಕಳಿ (ಕೊಡವ) ಈ ಚಿತ್ರಗಳು.
ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ 19 20 21, ಗಂಧದಗುಡಿ, ಗುರುಶಿಷ್ಯರು, ಹದಿನೇಳೆಂಟು, ಕನಕಮಾರ್ಗ, ಕೊರಮ್ಮ, ಕುಬುಸ, ಮೇಡ್ ಇನ್ ಬೆಂಗಳೂರು, ನಲ್ಕೆ, ನಾನು ಕುಸುಮ, ಆರ್ಕೆಸ್ಟ್ರಾ ಮೈಸೂರು, ಫೋಟೋ ಚಿತ್ರಗಳಿವೆ. ಈ ಬಾರಿ ಪ್ರಶಸ್ತಿ ಮೊತ್ತವನ್ನು ಏರಿಸಲಾಗಿದೆಯಲ್ಲದೆ, ಸಾಧಕರೊಬ್ಬನ್ನು ಗುರುತಿಸಿ ಅವರಿಗೆ ವಿಶೇಷ ಪ್ರಶಸ್ತಿ ನೀಡುವುದಾಗಿ ಅಕಾಡೆಮಿಯ ಅಧ್ಯಕ್ಷ ಹಾಗೂ ಚಿತ್ರೋತ್ಸವ ನಿರ್ದೇಶಕರಾಗಿರುವ ಅಶೋಕ ಕಶ್ಯಪ್ ಹೇಳಿದ್ದಾರೆ.
ವಿವಿಧ ವಿಭಾಗಗಳಲ್ಲಿ ಕನ್ನಡದ ಚಿತ್ರಗಳ ಸಂಖ್ಯೆ ನಲವತ್ತಕ್ಕೂ ಹೆಚ್ಚಿವೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸ್ಥಳೀಯ ಚಿತ್ರಗಳ ಪಾಲ್ಗೊಳ್ಳುವಿಕೆ ಇರುತ್ತದೆ. ಆದರೆ ಇಷ್ಟೊಂದು ಚಿತ್ರಗಳು ಇರುವುದಿಲ್ಲ ಎನ್ನುತ್ತಾರೆ, ಮಾನ್ಯತೆ ಪಡೆದ ಚಿತ್ರೋತ್ಸವಗಳ ಹಿನ್ನೆಲೆ, ಮುನ್ನೆಲೆ ಬಲ್ಲವರು.