Mysore
22
broken clouds

Social Media

ಶನಿವಾರ, 13 ಜೂನ್ 2026
Light
Dark

ಪತ್ನಿ ಕೊಲೆಗೆ ಯತ್ನಿಸಿದ ಪತಿಗೆ 12 ವರ್ಷ ಜೈಲು

ಮೈಸೂರು: ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ ಪತಿಗೆ ೧೨ ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ೧೨ ಸಾವಿರ ರೂ. ದಂಡ ವಿಧಿಸಿ, ೫ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ಹುಣಸೂರು ತಾಲ್ಲೂಕಿನ ಹೊಸಪುರ ಗ್ರಾಮದ ಕಾಳನಾಯಕ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ೧೪ ವರ್ಷಗಳ ಹಿಂದೆ ಇದೇ ತಾಲ್ಲೂಕಿನ ಚಲ್ಲಹಳ್ಳಿ ಗ್ರಾಮದ ಮಂಗಳಮ್ಮ ಎಂಬವರನ್ನು ಮದುವೆಯಾಗಿದ್ದ. ಇವರಿಗೆ ಇಬ್ಬರೂ ಮಕ್ಕಳಿದ್ದಾರೆ. ಮದುವೆಯಾದ ೭ರಿಂದ ೮ ವರ್ಷ ಅನ್ಯೋನ್ಯತೆಯಿಂದ ಇದ್ದರು. ಆ ನಂತರದಲ್ಲಿ ಕಾಳನಾಯಕ ಕುಡಿದು ಬಂದು ಹೆಂಡತಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ.
೨೦೧೭ರ ಫೆ.೪ರಂದು ಮಧ್ಯಾಹ್ನ ೩.೩೦ರಲ್ಲಿ ಕಾಳನಾಯಕ ಮನೆಯಲ್ಲಿ ಮಕ್ಕಳ ಜೊತೆಗೆ ಇದ್ದ ಹೆಂಡತಿಯನ್ನು ನೀನು ಮನೆ ಬಿಟ್ಟು ಹೋಗು ಎಂದು ಜಗಳ ತೆಗೆದು, ನೀನು ಸತ್ತು ಹೋದರೆ, ನಾನು ಇನ್ನೊಂದು ಮದುವೆಯಾಗುತ್ತೇನೆ ಎಂದು ಹೇಳಿ ಗಲಾಟೆ ಮಾಡಿದ್ದಾನೆ. ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಇದರಿಂದ ಕುತ್ತಿಗೆಯಿಂದ ಪಾದದವರೆಗೂ ಶೇ.೫೪ರಷ್ಟು ಭಾಗ ಮಂಗಳಮ್ಮನಿಗೆ ಸುಟ್ಟಗಾಯಗಳಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಿಳಿಕೆರೆ ಠಾಣೆ ಪೊಲೀಸರು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ೫ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಐಪಿಸಿ ಕಲಂ ೩೦೭ಕ್ಕೆ ಅಪರಾಧ ೧೦ ವರ್ಷಗಳ ಜೈಲು ಮತ್ತು ೧೦ ಸಾವಿರ ರೂ. ದಂಡ ಮತ್ತು ಐಪಿಸಿ ಕಲಂ ೪೯೮(ಎ) ಅಪರಾಧಕ್ಕೆ ೨ ವರ್ಷಗಳ ಜೈಲು ಮತ್ತು ೨ ಸಾವಿರ ರೂ. ದಂಡ ಸೇರಿದಂತೆ ಒಟ್ಟು ೧೨ ವರ್ಷಗಳ ಜೈಲು ಶಿಕ್ಷೆ ಮತ್ತು ೧೨ ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗಪ್ಪ ಸಿ.ನಾಕಮನ್ ವಾದ ಮಂಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!