ರಾಜ್ಯದ ರೈಲ್ವೆ ಚರಿತ್ರೆಯಲ್ಲಿ ಹೊಸ ಶಕೆ ಆರಂಭ, ಬೆಂಗಳೂರು- ಮೈಸೂರು ಈಗ ಇನ್ನಷ್ಟೂ ಹತ್ತಿರ
ಮೈಸೂರು: ಚೆನ್ನೈ-ಬೆಂಗಳೂರು ಹಾಗೂ ಮೈಸೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಾಯೋಗಿಕ ಸಂಚಾರದ ಭಾಗವಾಗಿ ಸೋಮವಾರ 12.10 ನಿಮಿಷಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಿದ್ದು, ಕರ್ನಾಟಕದ ರೈಲ್ವೆ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ.
ಮುಂಜಾನೆ 5.50ಕ್ಕೆ ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದ ರೈಲು ಬೆಳಗ್ಗೆ 10.20 ಕ್ಕೆ ಬೆಂಗಳೂರಿಗೆ ಆಗಮಿಸಿತು. ಅಲ್ಲಿಂದ 10.30ಕ್ಕೆ ಹೊರಟು 12.10 ನಿಮಿಷಕ್ಕೆ ಮೈಸೂರು ನಿಲ್ದಾಣ ತಲುಪಿದೆ.
160 ಕಿ.ಮೀ. ವೇಗದಲ್ಲಿ ಚಲಿಸುವ ದೇಶದ ಅತಿ ವೇಗದ ವಂದೇ ಭಾರತ್ (Vande Bharat Express train) ರೈಲನ್ನು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಆರಂಭಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ಕ್ಕೆ 5ನೇ ವಂದೇಭಾರತ್ ಎಕ್ಸ್ಪ್ರೆಸ್ ರೈಲಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಸೋಮವಾರ ಬೆಳಿಗ್ಗೆ ಚೆನ್ನೈ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣದಿಂದ ಫ್ಲ್ಯಾಗ್ ಆಫ್ ಮಾಡಲಾಯಿತು. ಎರಡು ನಗರಗಳ ನಡುವಿನ 504 ಕಿಲೋ ಮೀಟರ್ ದೂರವನ್ನು ಸುಮಾರು ಆರೂವರೆ ಗಂಟೆಗಳಲ್ಲಿ ಕ್ರಮಿಸುವ ರೈಲು ಮಧ್ಯಾಹ್ನ 12:10 ಕ್ಕೆ ಮೈಸೂರು ತಲುಪುವ ಮೂಲಕ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದೆ.
ಈ ರೈಲು ಚೆನ್ನೈನ ಪೆರಂಬೂರಿನಲ್ಲಿರುವ ಐಸಿಎಫ್ನಲ್ಲಿ(ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ಸಿದ್ಧವಾಗಿದೆ. ರೈಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಅಗತ್ಯ ಮಾರ್ಪಾಡು ಮಾಡಲು ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಮೈಸೂರಿನಿಂದ 1.10 ನಿಮಿಷಕ್ಕೆ ಹೊರಟ ರೈಲು ಮಧ್ಯಾಹ್ನ 2.55ಕ್ಕೆ ಬೆಂಗಳೂರಿಗೆ ತಲುಪಿದ್ದು 3.10ಕ್ಕೆ ಚೆನ್ನೈನತ್ತ ಹೊರಡಲಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ವಿಶೇಷತೆಗಳೇನು?
ದೇಶದ ಅತ್ಯಂತ ವೇಗದ ರೈಲು ಇದಾಗಿದ್ದು, ಶತಾಬ್ದಿ ಎಕ್ಸ್ಪ್ರೆಸ್ಗಿಂತ ಶರವೇಗದಲ್ಲಿ ಓಡಲಿದೆ. ಆದರೆ ಮೈಸೂರು-ಚೆನ್ನೈ ಮಾರ್ಗದಲ್ಲಿ ಸದ್ಯಕ್ಕೆ 70ರಿಂದ 80 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು ದೇಶದ ಇತರೆಡೆ ಸಂಚರಿಸುತ್ತಿರುವಷ್ಟು ವೇಗದಲ್ಲಿ ಈ ರೈಲು ಓಡುವುದಿಲ್ಲ ಎಂದು ಹೇಳಲಾಗಿದೆ.
ದೇಶದ ಅತಿ ವೇಗದ ರೈಲು. ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದದ ಸಾಮರ್ಥ್ಯ, ಐಶಾರಾಮಿ ವ್ಯವಸ್ಥೆ ಇದ್ದು, ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್ಗಳನ್ನು ಹೊಂದಿದೆ. ವಂದೇ ಭಾರತ್ ರೈಲಿನಲ್ಲಿ ಆನ್ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ, ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಸಿಸಿಟೀವಿ, ಬಯೋ ಶೌಚಾಲಯಗಳನ್ನು ಹೊಂದಿದೆ. 16 ಬೋಗಿಗಳನ್ನು ಹೊಂದಿದ್ದು, 384 ಮೀ. ಉದ್ದವಿದೆ. ಪ್ರತ್ಯೇಕ ಎಂಜಿನ್ ಇಲ್ಲ. ರೈಲಿನ ವೇಗ ಅಧಿಕವಾಗಿರುವುದರಿಂದ ಪ್ರಯಾಣದ ಸಮಯ ಶೇಕಡಾ 25ರಿಂದ 45ರವರೆಗೆ ಕಡಿಮೆಯಾಗಲಿದೆ. ಪ್ರತಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅವಳಿ ಇಂಜಿನ್ ಬೋಗಿ ಸೇರಿ 1,180 ಪ್ರಯಾಣಿಕರ ಸೀಟಿನ ಸಾಮರ್ಥ್ಯವನ್ನು ಹೊಂದಿದೆ.
ರೈಲಿನ ದರ: ಮೈಸೂರು, ಚೆನ್ನೈ ನಡುವಿನ ಪ್ರಯಾಣದರ ಎಕಾನಮಿ ಕ್ಲಾಸ್ 921 ರೂ. ಎಕ್ಸಿಕ್ಯುಟಿವ್ ಕ್ಲಾಸ್ 1880 ರೂ.
ಮೈಸೂರು, ಬೆಂಗಳೂರು ನಡುವಿನ ಪ್ರಯಾಣದರ ಎಕಾನಮಿ ಕ್ಲಾಸ್ 368 ರೂ. ಎಕ್ಸಿಕ್ಯುಟಿವ್ ಕ್ಲಾಸ್ 768 ರೂ.ಆಗಿರಲಿದೆ.
ರಾಜ್ಯದ ಮೊದಲ, ದೇಶದ 5ನೇ ವಂದೇ ಭಾರತ್ ರೈಲು 2019ರಲ್ಲಿ ಮೊದಲ ಬಾರಿಗೆ ಪ್ರಯಾಣ ಆರಂಭಿಸಿದ ವಂದೇ ಭಾರತ್ ಪ್ರಸ್ತುತ ನಾಲ್ಕು ರೈಲುಗಳ ಸೇವೆಯನ್ನು ನೀಡುತ್ತಿದೆ. ನ.11ರಂದು ಮೈಸೂರು ಮತ್ತು ಚೆನ್ನೈ ನಡುವೆ ಆರಂಭವಾಗುತ್ತಿರುವ ರೈಲು ಐದನೆಯದ್ದಾಗಿದೆ. ಮೈಸೂರು ಮತ್ತು ಚೆನ್ನೈ ನಡುವಿನ 504 ಕಿ.ಮೀ. ದೂರವನ್ನು ಈ ರೈಲು 7 ತಾಸುಗಳಲ್ಲಿ ಕ್ರಮಿಸಲಿದೆ.ಈಗಾಗಲೇ ದೆಹಲಿ-ವಾರಾಣಸಿ, ದೆಹಲಿ-ಶ್ರೀಮಾತಾ ವೈಷ್ಣೋದೇವಿ, ಮುಂಬೈ-ಗಾಂಧಿನಗರ, ದೆಹಲಿ-ಅಂಬ್ ಅಂದೌರಾ ನಡುವೆ ವಂದೇ ಭಾರತ್ ರೈಲುಗಳು ಚಲಿಸುತ್ತಿವೆ.
ದೇಶದ ಅತಿ ವೇಗದ ರೈಲು ವಿಮಾನದ ರೀತಿಯ ವಿನ್ಯಾಸ
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದೇಶದಲ್ಲೇ ಅತಿ ವೇಗವಾಗಿ ಚಲಿಸುವ ರೈಲಾಗಿದೆ. ಈ ರೈಲು ಪ್ರತಿಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಈ ರೈಲು 0 ಇಂದ 100 ಕಿ.ಮೀ. ವೇಗಕ್ಕೆ ಕೇವಲ 52 ಸೆಕೆಂಡ್ಗಳಲ್ಲಿ ತಲುಪಬಲ್ಲದು. ವಿಶ್ವದ ಅತ್ಯಂತ ವೇಗದ ರೈಲುಗಳ ಪೈಕಿ ಒಂದು ಎನ್ನಿಸಿಕೊಂಡಿರುವ ಜಪಾನ್ನ ಬುಲೆಟ್ ರೈಲು ಈ ವೇಗವನ್ನು ತಲುಪಲು 54.6 ಸೆಕೆಂಡ್ಗಳನ್ನು ತೆಗೆದುಕೊಳ್ಳುತ್ತದೆ. ಇಡೀ ರೈಲನ್ನು ಏರೋಡೈನಾಮಿಕ್ಸ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಗಾಳಿಯ ತಡೆಯನ್ನು ಬೇಧಿಸಿ ರೈಲು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ.
2019ರಲ್ಲಿ ಮೊದಲ ಪ್ರಯಾಣ ಮಾಡಿದ ವಂದೇ ಭಾರತ್ ದೇಶದಲ್ಲಿರುವ ರೈಲು ಸೇವೆಯ ವೇಗವನ್ನು ವೃದ್ಧಿ ಮಾಡುವ ಉದ್ದೇಶದಿಂದ ಸರ್ಕಾರ ವಂದೇ ಭಾರತ್ ರೈಲುಗಳ ಉತ್ಪಾದನೆಗೆ ಅನುಮತಿಯನ್ನು ನೀಡಿತ್ತು. ವೇಗ ರೈಲು ಸೇವೆಗಾಗಿಯೇ ಆರಂಭಿಸಿದ ಗತಿಮಾನ್ ಎಕ್ಸ್ಪ್ರೆಸ್ನ ಸರಾಸರಿ ವೇಗ ಗಂಟೆಗೆ 99 ಕಿ.ಮೀ. ಇತ್ತು. ಇದನ್ನು ಮತ್ತಷ್ಟು ಹೆಚ್ಚು ಮಾಡಿದ್ದು ವಂದೇ ಭಾರತ್ ಎಕ್ಸ್ಪ್ರೆಸ್. 2018ರಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡ ಬಳಿಕ ಮೊದಲ ಬಾರಿಗೆ 2019ರ ಫೆ.15ರಂದು ಮೊದಲ ರೈಲಿಗೆ ಚಾಲನೆ ನೀಡಲಾಯಿತು. ಈ ರೈಲು ಶೇ.85ರಷ್ಟು ದೇಶೀಯವಾಗಿ ನಿರ್ಮಾಣ ಮಾಡಲಾಗಿದೆ. ಈ ರೈಲು ನವದೆಹಲಿಯಿಂದ ವಾರಾಣಸಿ ನಡುವಿನ 750 ಕಿ.ಮೀ.ಗಳನ್ನು ಯಶಸ್ವಿಯಾಗಿ ಕ್ರಮಿಸಿತು. ರೈಲು ಪ್ರಯಾಣ ಯಶಸ್ವಿಯಾದ ಬಳಿಕ ಈ ರೈಲನ್ನು ಮತ್ತಷ್ಟುಉನ್ನತ ದರ್ಜೆಗೇರಿಸಿ ಮತ್ತಷ್ಟು ಮಾರ್ಗಗಳಿಗೂ ವಿಸ್ತರಿಸಲಾಯಿತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 400 ಹೊಸ ತಲೆಮಾರಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದಿಸಿ ಅಭಿವೃದ್ಧಿಪಡಿಸುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.