ಮಡಿಕೇರಿ: ಕೊಡಗು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮಹಿಳೆಯರ ಮೃತದೇಹದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ವಿಕೃತಕಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಡಗದಾಳು ನಿವಾಸಿ ಸೈಯದ್ (24)ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಡಿಕೇರಿಯ ವೃದ್ದೆಯೊಬ್ಬರ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿ ಪರಾರಿಯಾಗಿದ್ದ ಸೈಯದ್ ತನ್ನ ಪೋನ್ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಆತನ ಫೋನ್ ಪರಿಶೀಲಿಸಿದಾಗ ಶವಾಗಾರದಲ್ಲಿದ್ದ ಮಹಿಳೆಯರ ಶವಗಳ ಫೋಟೋ ಪತ್ತೆಯಾಗಿತ್ತು.
ಈ ಬಗ್ಗೆ ತನಿಖೆ ಆರಂಭಿಸಿದ್ದ ಮಡಿಕೇರಿ ನಗರ ಪೊಲೀಸರು ಆರೋಪಿ ವಿರುದ್ಧ ಮಾನಭಂಗ ಪ್ರಕರಣ ದಾಖಲಿಸಿ, ಹುಡುಕಾಟ ಆರಂಭಿಸಿದ್ದರು.
ಸೈಯದ್ ಇತ್ತೀಚೆಗಷ್ಟೆ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಸೆಪ್ಟೆಂಬರ್ 22ರಂದು ರಾತ್ರಿ ಸುಮಾರು11 ಗಂಟೆಗೆ 74 ವರ್ಷದ ವೃದ್ಧೆಯ ಮನೆಗೆ ಆಗಮಿಸಿದ ಸೈಯದ್ ಮನೆ ಬಾಗಿಲು ಬಡಿದಿದ್ದಾನೆ. ಬಾಗಿಲು ತೆರೆದಾಕ್ಷಣ ಸೈಯದ್ ಮನೆ ಒಳಗೆ ನುಗ್ಗಿ ಮಾನ ಭಂಗಕ್ಕೆ ಯತ್ನಿಸಿದ್ದಾನೆ. ವೃದ್ಧೆ ಈ ಸಂದರ್ಭದಲ್ಲಿ ಜೋರಾಗಿ ಕಿರುಚಿಕೊಂಡಿದ್ದು, ಪಕ್ಕದ ಮನೆಯವರು ಹೊರಬರುವಷ್ಟರಲ್ಲಿ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು.
ಪರಾರಿಯಾಗುವ ಸಂದರ್ಭದಲ್ಲಿ ಸೈಯದ್ ತನ್ನ ಫೋನನ್ನು ಮನೆಯಲ್ಲೇ ಬಿಟ್ಟು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಮೊಬೈಲ್ ಘೋನನ್ನು ಪರಿಶೀಲಿಸುವ ವೇಳೆ ಆರೋಪಿ ಸೈಯದ್ ಮೃತ ಮಹಿಳೆಯರ ಚಿತ್ರ ತೆಗೆದಿರುವುದು ಬೆಳಕಿಗೆ ಬಂದಿತ್ತು. ಇದೀಗ ಸೈಯದ್ ನನ್ನು ಮಡಿಕೇರಿ ನಗರ ಠಾಣೆ ಪೊಲೀಸರು ಬಂಧಿಸಿ ಸೆಕ್ಷನ್ 445 ಹಾಗೂ 354ರಡಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯ ಆರೋಪಿ ಸೈಯದ್ಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆಸ್ಪತ್ರೆಯಲ್ಲಿ ಕರ್ತವ್ಯನಿರತ ಮಹಿಳೆಯರನ್ನೂ ಸೈಯದ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಗಳಿದ್ದು ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





