Mysore
24
overcast clouds

Social Media

ಶನಿವಾರ, 13 ಜೂನ್ 2026
Light
Dark

ಸತತ ಮಳೆಗೆ ಬೆಳೆಗೆ ಬಂತು ಜೀವಕಳೆ

ಹನೂರು : ಮಳೆಯಿಲ್ಲದೆ ಸೊರಗುತ್ತಿದ್ದ ಪೈರುಗಳಿಗೆ ಕಳೆದ 4 ದಿನಗಳಿಂದ ಬೀಳುತ್ತಿರುವ ಮಳೆಗೆ ಜೀವಕಳೆ ಬಂದಂತಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಕೃಷಿ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

ಹನೂರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಜಮೀನುಗಳು ಖುಷ್ಕಿ ಪ್ರದೇಶದಿಂದ ಕೂಡಿದ್ದು, ಇಲ್ಲಿನ ರೈತರು ಮುಖ್ಯವಾಗಿ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಮುಂಗಾರಿನಲ್ಲಿ ಹೆಚ್ಚಾಗಿ ರಾಗಿ ಹಾಗೂ ಮುಸುಕಿನ ಜೋಳವನ್ನು ಬೆಳೆಯುತ್ತಾರೆ. ಕಳೆದ 2 ವರ್ಷದ ಹಿಂದೆ ನಿಗಧಿತ ಅವಧಿಯಲ್ಲಿ ಸಮರ್ಪಕ ಮಳೆಯಾಗಿರಲಿಲ್ಲ. ಇದರಿಂದ ಕೆಲ ರೈತರು ಕೃಷಿಯಲ್ಲಿ ನಷ್ಟವನ್ನು ಅನುಭವಿಸಿದರೆ ಕಳೆದ ವರ್ಷ ಉತ್ತಮ ಮಳೆಯಾದ್ದರಿಂದ ರಾಗಿ ತೆನೆ ಕಟಾವಿನ ವೇಳೆ ರೈತರು ತುಂಬಾ ತೊಂದರೆಯನ್ನು ಎದುರಿಸಿದರು. ಆದರೆ ಈ ವರ್ಷ ಕಳೆದ 2 ತಿಂಗಳ ಹಿಂದೆ ಈ ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ರೈತರು ಜಮೀನನ್ನು ಉಳುಮೆ ಮಾಡಿ ರಾಗಿ, ಮುಸುಕಿನ ಜೋಳ ಹಾಗೂ ಕಡಲೆಕಾಯಿಯನ್ನು ಬಿತ್ತನೆ ಮಾಡಿದ್ದು, ಪೈರುಗಳು ಉತ್ತಮವಾಗಿ ಬಂದಿದ್ದವು.

ಆದರೆ ಕಳೆದ 15 ದಿನಗಳ ಕಾಲ ಸತತ ಮಳೆಯಿಲ್ಲದ ಪರಿಣಾಮ ಬಿಸಿಲಿನ ತಾಪಕ್ಕೆ ರಾಗಿ ಹಾಗೂ ಮುಸುಕಿನ ಜೋಳದ ಪೈರುಗಳು ಸೊರಗುತ್ತಿದ್ದವು. ಇತ್ತ ಕಡಲೆಕಾಯಿ ಫಸಲಿನಲ್ಲಿ ಬೀಜಗಳು ಬಲಿಷ್ಠಗೊಳ್ಳದೇ ಕಮರಿಸಿತ್ತು. ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದ್ದು, ಮಳೆ ಯಾವಾಗ ಬರುವುದೆಂದು ಕಾದು ಕುಳಿತ್ತಿದ್ದರು. ಇದೀಗ ಕಳೆದ 4 ದಿನಗಳಿಂದ ರಾತ್ರಿ ವೇಳೆ ಸಾಧಾರಣಾ ಮಳೆಯಾಗುತ್ತಿರುವುದರಿಂದ ಸೊರಗುತ್ತಿದ್ದ ಪೈರುಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಇದರಿಂದ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಢಿದ್ದು, ಕಳೆ ತೆಗೆಸುವುದು, ರಸಗೊಬ್ಬರ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಆಗಾಗಿ ಹನೂರು ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಬಿತ್ತನೆ ವಿವರ: ಹನೂರು ಹೋಬಳಿ ವಾಪ್ತಿಯಲ್ಲಿ ಸುಮಾರು 9,690 ಹೆಕ್ಟೇರ್ ಪ್ರದೇಶ ಕೃಷಿ ಭೂಮಿ ಇದ್ದು, ಇದರಲ್ಲಿ 2,670 ಹೆಕ್ಟೇರ್‍ನಲ್ಲಿ ರಾಗಿ, 5,500 ಹೆಕ್ಟೇರ್‍ನಲ್ಲಿ ಮುಸುಕಿನ ಜೋಳ ಹಾಗೂ 65 ಹೆಕ್ಟೇರ್‍ನಲ್ಲಿ ಕಡಲೆಕಾಯಿಯನ್ನು ಬಿತ್ತನೆ ಮಾಡಲಾಗಿದೆ. ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ 12,660 ಹೆಕ್ಟೇರ್ ಕೃಷಿ ಭೂಮಿ ಇದ್ದು, ಇದರಲ್ಲಿ 4,400 ಹೆಕ್ಟೇರ್‍ನಲ್ಲಿ ರಾಗಿ, 5,200 ಹೆಕ್ಟೇರ್‍ನಲ್ಲಿ ಮುಸುಕಿನ ಜೋಳ ಹಾಗೂ 72 ಹೆಕ್ಟೇರ್‍ನಲ್ಲಿ ಕಡಲೆಕಾಯಿಯನ್ನು ಬಿತ್ತನೆ ಮಾಡಲಾಗಿದೆ. ಇನ್ನು ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿ ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿ 10,615 ಹೆಕ್ಟೇರ್ ಪ್ರದೇಶವಿದ್ದು, ಇದರಲ್ಲಿ 2,400 ಹೆಕ್ಟೇರ್‍ನಲ್ಲಿ ರಾಗಿ, 5,800 ಹೆಕ್ಟೇರ್‍ನಲ್ಲಿ ಮುಸುಕಿನ ಜೋಳ ಹಾಗೂ 32 ಹೆಕ್ಟೇರ್‍ನಲ್ಲಿ ನೆಲೆಗಡಲೆಯನ್ನು ಬಿತ್ತನೆ ಮಾಡಲಾಗಿದೆ.

ಮಹಿಳಾ ಕೃಷಿ ಕೆಲಸಗಾರರಿಗೆ ಡಿಮ್ಯಾಂಡ್ : ಈ ಭಾಗದಲ್ಲಿ ಹೆಚ್ಚಿನ ರೈತರು ರಾಗಿಯನ್ನು ಬಿತ್ತನೆ ಮಾಡಿದ್ದು, ಬಿಸಿಲಿನ ತಾಪಕ್ಕೆ ಸೊರಗುತ್ತಿದ್ದ ಪೈರುಗಳು ಸಾಧಾರಣಾ ಮಳೆಯಿಂದಾಗಿ ಬೆಳವಣಿಗೆಯಲ್ಲಿ ಉತ್ತಮತೆಯನ್ನು ಪಡೆದುಕೊಳ್ಳುತ್ತಿದೆ. ಆಗಾಗಿ ಫಸಲು ಚೆನ್ನಾಗಿ ಮೂಢಿಬರುವ ಉದ್ಧೇಶದಿಂದ ರೈತರು ಸಾವಿರಾರು ರೂ ಅನ್ನು ವ್ಯಯಿಸಿ ಕಳೆದ 2 ದಿನಗಳಿಂದ ಮಹಿಳಾ ಕೂಲಿ ಆಳುಗಳಿಂದ ಕಳೆಯನ್ನು ತೆಗೆಯಿಸುತ್ತಿದ್ದು, ಅಗತ್ಯ ಗೊಬ್ಬರವನ್ನು ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೂಲಿ ಆಳುಗಳಿಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿದ್ದು, ಸಾಮಾನ್ಯ ದಿನಗಳಲ್ಲಿ 150 ರೂ ಇದ್ದ ಕೂಲಿ ಹಣ ಇದೀಗ 220 ರೂಗೆ ಏರಿಕೆಯಾಗಿದೆ.

ಕಳೆದ 4ದಿನಗಳಿಂದ ಸತತ ಮಳ ಸಂತಸದ ವಿಚಾರ. ರೈತರು ತಮ್ಮ ಬೆಳೆಗಳಿಗೆ ಯೂರಿಯಾ ಜೊತೆ ಪೊಟ್ಯಾಶ್ ಹಾಗೂ ಇನ್ನಿತರ ರಾಸಾಯನಿಕ ಗೊಬ್ಬರಗಳನ್ನು ಸಹ ಸಿಂಪಡಣೆ ಮಾಡಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹಾಗೂ ಇಳುವರಿಯೂ ಹೆಚ್ಚಾಗುತ್ತದೆ.

ರಘುವೀರ್ ಕೃಷಿ ಅಧಿಕಾರಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!