ಕೊಳ್ಳೇಗಾಲ : ನಗರಸಭೆ 7 ವಾರ್ಡ್ ಗಳಿಗೆ ನಡೆದ ಉಪ ಚುನಾವಣೆ ಯಲ್ಲಿ ಎನ್ ಮಹೇಶ್ ಬೆಂಬಲಿಗರು ಜಯ ಗಳಿಸಿದ್ದಾರೆ..
ಉಪಚುನಾವಣೆ ಮಾಸ್ಟರ್ ಮೈಂಡ್ ಎಂದೇ ಪ್ರಸಿದ್ಧಿ ಪಡೆದಿರುವ ಸಚಿವ ವಿ ಸೋಮಣ್ಣ ರವರ ಎಲ್ಲಚುನಾವಣಾ ತಂತ್ರಗಳು ನಗರಸಭೆ ಉಪಚುನಾವಣೆ ಯಶಸ್ಸು ಕಂಡಿದೆ.
ಬಿಎಸ್ಪಿ ಪಕ್ಷದಿಂದ ಚುನಾಯಿತರಾಗಿ ಆಯ್ಕೆಯಾಗಿದ್ದ ಸದಸ್ಯರುಗಳು ನಗರಸಭೆಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಬಿಎಸ್ ಪಿ ಪಕ್ಷದಿಂದ ಸ್ಪರ್ಧಿಸಿದ್ದ ಜಯಮೇರಿ ಅವರನ್ನು ಬೆಂಬಲಿಸಲಿಲ್ಲ ಎಂದು ಜಿಲ್ಲಾಧಿಕಾರಿಗಳ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಕೋರ್ಟ್ ನಲ್ಲಿ 7 ಬಿಎಸ್ಪಿ ಸದಸ್ಯರನ್ನು ಅನರ್ಹಗೊಳಿಸಲಾಗಿತ್ತು. ಅನರ್ಹ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು ಸಹ ಜಿಲ್ಲಾಧಿಕಾರಿಗಳ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದರಿಂದ ಇವರ ಸದಸ್ಯತ್ವ ವಜಾಗೊಂಡಿತ್ತು. ಸದಸ್ಯತ್ವ ವಜಾಗೊಂಡ ಹಿನ್ನೆಲೆ ನಡೆದ ಕೊಳ್ಳೇಗಾಲ ನಗರಸಭೆ ಉಪಚುನಾವಣೆ 7ಸ್ಥಾನಗಳಿಗೆ ಶಾಸಕ ಎನ್ ಮಹೇಶ್ ಬೆಂಬಲಿತ ಸದಸ್ಯರುಗಳಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಇವರೆಲ್ಲರನ್ನು ಗೆಲ್ಲಿಸಿಕೊಂಡು ಬರಲು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ನವರ ಮಾರ್ಗದರ್ಶನದಲ್ಲಿ ಶಾಸಕ ಎನ್ ಮಹೇಶ್ ಹಾಗೂ ಮಾಜಿ ಶಾಸಕ ನಂಜುಂಡಸ್ವಾಮಿ ಒಗ್ಗಟ್ಟು ಪ್ರದರ್ಶಿಸಿ ಸಂಘಟನೆಗೆ ಒತ್ತು ನೀಡಿದ್ದರಿಂದ ಉಪಚುನಾವಣೆ ಯಲ್ಲಿ 6 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಗೆ ಮುಖಭಂಗ : ನಗರಸಭೆ 7ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಒಬ್ಬ ಅಭ್ಯರ್ಥಿ ಜಯ ಗಳಿಸಿ ಉಳಿದ 6 ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಸೇರಿದಂತೆ ಮೂವರು ಮಾಜಿ ಶಾಸಕರುಗಳಿಗೆ ಈ ಉಪಚುನಾವಣೆಯಲ್ಲಿ ಮುಖಭಂಗವಾಗಿದೆ.
ಬಣ ರಾಜಕೀಯ ಶಮನ : ಬಣ ರಾಜಕಾರಣದಿಂದಾಗಿ ಹಲವು ಗುಂಪುಗಳಾಗಿದ್ದ ಎಲ್ಲಾ ಬಣಗಳನ್ನು ಮಧುವನಹಳ್ಳಿ ರೆಸಾರ್ಟ ನಲ್ಲಿ ಒಂದುಗೂಡಿಸಿ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಸೂಚನೆ ನೀಡಿದ್ದು ಬಿಜೆಪಿ ಗೆಲುವಿಗೆ ವರದಾನವಾಗಿದೆ .