ಮೈಸೂರು : ಗಿಲ್ಕಿ ವೆಂಕಟೇಶ್ ಮರ್ಡರ್, ದಸರಾಗೆ ಬಲೂನು ಮಾರಲು ಬಂದಿದ್ದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಸೇರಿ ಹಲವು ಅಪರಾಧ ಕೃತ್ಯಗಳು ಕಳೆದ ಕೆಲ ದಿನಗಳಿಂದ ಮೈಸೂರಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ, ನಾಳೆ ಹಿರಿಯ ಅಧಿಕಾರಿಗಳ ಜೊತೆ ಮೈಸೂರಲ್ಲಿ ಸಭೆ ಕರೆದಿದ್ದಾರೆ.
ಮುಖ್ಯಮಂತ್ರಿಗಳ ಮೈಸೂರು ಪ್ರವಾಸ ಪಟ್ಟಿ ಬಿಡುಗಡೆಯಾಗಿದ್ದು, ನಾಳೆ ರಾತ್ರಿ 7.25ಕ್ಕೆ ಮೈಸೂರಿಗೆ ತಲುಪಲಿದ್ದಾರೆ. ಕೊಲೆ ಪ್ರಕರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಿರುವ ಸಿದ್ದರಾಮಯ್ಯ ಬಳಿಕ ಬಳಿಕ ಖಾಸಗಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಇದನ್ನೂ ಓದಿ:-ರಾಜ್ಯದಲ್ಲಿ ನಾಳೆಯೂ ವರುಣನ ಅಬ್ಬರ, ಮೈಸೂರಿಗೆ ಯೆಲ್ಲೋ ಅಲರ್ಟ್
ಅತ್ಯಂತ ಹೀನ ಕೃತ್ಯ
ಬಾಲಕಿ ಅತ್ಯಾಚಾರ ಮತ್ತು ಕೊಲೆ ಘಟನೆ ಬಗ್ಗೆ ಕೇಳಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದು ಸಚಿವ ಹೆಚ್. ಸಿ. ಮಹದೇವಪ್ಪ ಹೇಳಿದ್ದಾರೆ. ವಿಚಾರ ತಿಳಿದ ತಕ್ಷಣವೇ ನಾನು ಪೊಲೀಸ್ ಕಮಿಷನರ್ ಜೊತೆಗೆ ಮಾತನಾಡಿದ್ದೇನೆ. 24 ಗಂಟೆಯಲ್ಲಿ ಆರೋಪಿಯನ್ನ ಬಂಧಿಸುವಂತೆ ಸೂಚಿಸಿದ್ದೆ. ಇದೊಂದು ಅತ್ಯಂತ ಹೀನ ಕೃತ್ಯವಾಗಿದ್ದು, ನಾಗರಿಕ ಸಮಾಜ ಇಂತಹ ಘಟನೆಗಳನ್ನು ಖಂಡಿಸಬೇಕು ಎಂದಿದ್ದಾರೆ.





