ಕುಸಿಯುವ ಹಂತದಲ್ಲಿದ್ದರೂ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ; ಸೂಕ್ತ ಕ್ರಮಕ್ಕೆ ಒತ್ತಾಯ
ಕಾಂಗೀರ ಬೋಪಣ್ಣ
ವಿರಾಜಪೇಟೆ : ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಸುಮಾರು ಮುಕ್ಕಾಲು ಶತಮಾನ ಸವೆಸಿ ಶಿಥಿಲಗೊಂಡಿರುವ ಮಾರುಕಟ್ಟೆ ಕಟ್ಟಡ ಅವಘಡಕ್ಕಾಗಿ ಕಾಯುತ್ತಿದ್ದು, ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿರಾಜಪೇಟೆ ಪುರಸಭೆಯ ಸನಿಹವೇ ಬ್ರಿಟಿಷರು ನಿರ್ಮಿಸಿರುವ ಇಂದಿಗೂ ಸುಸ್ಥಿತಿಯಲ್ಲಿರುವ ಪಾರಂಪರಿಕ ಕಟ್ಟಡವನ್ನು ಒಡೆದು ಹಾಕಿ ಅದೇ ಸ್ಥಳದಲ್ಲಿ ನೂತನ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಉಮೇದಿನಲ್ಲಿ ಜನಪ್ರತಿನಿಧಿಗಳು ಮತ್ತು ಅವರ ಹಿಂಬಾಲಕರು ಇದ್ದಾರೆ. ಆದರೆ ಪಟ್ಟಣದ ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಶಿಥಿಲಾವಸ್ಥೆಯಲ್ಲಿರುವ, ಅವಘಡಕ್ಕಾಗಿ ಕಾಯುತ್ತಿರುವ ಮಾರುಕಟ್ಟೆ ಕಟ್ಟಡವನ್ನು ಕೆಡವಿ ಅಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕೆಂಬ ಆಸಕ್ತಿ ಯಾರಿಗೂ ಇದ್ದಂತಿಲ್ಲ.
ನಿತ್ಯ ವಹಿವಾಟು ನಡೆಯುವ, ನಿತ್ಯ ಜನರ ಓಡಾಟದಿಂದ ಕೂಡಿರುವ ಮುಕ್ಕಾಲು ಶತಮಾನ ಪೂರೈಸಿರುವ ಮಾರುಕಟ್ಟೆಯ ಒಂದು ಭಾಗ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಒಳ ಭಾಗ ಶಿಥಿಲಗೊಂಡು ಮಳೆಯ ನೀರು ಸೋರುತ್ತಿದ್ದು, ಅದನ್ನು ತಡೆಯಲು ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಲಾಗಿದೆ.
ಇನ್ನೊಂದೆಡೆ ಸುಮಾರು ೩೦ ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ನಿರ್ಮಿಸಿರುವ ಮಳಿಗೆಯೂ ಸಹ ಶಿಥಿಲಗೊಂಡು ಮಳೆ ಬಿದ್ದಾಗ ನೀರು ಸೋರುತ್ತದೆ. ಈ ಕಟ್ಟಡ ಸಂಪೂರ್ಣ ಅಭದ್ರತೆಯಿಂದ ಕೂಡಿದೆ. ಹಾಗೆಯೇ ಬಸ್ ನಿಲ್ದಾಣದ ಒಳಗೆ ನಿರ್ಮಿಸಿರುವ ನಾಲ್ಕು ಮಳಿಗೆಗಳೂ ಕೂಡ ಸೋರುತ್ತಿದ್ದು, ಕೆಲವೆಡೆ ಬಿರುಕು ಬಿಟ್ಟಿವೆ.
ಇದೇ ಸ್ಥಳದಲ್ಲಿರುವ ಹತ್ತಾರು ವಾಣಿಜ್ಯ ಮಳಿಗೆಗಳ ಕಟ್ಟಡ ಬಳಕೆಗೆ ಬಾರದೆ ಅನಾಥವಾಗಿದೆ. ಹರಕು ಮುರುಕು ಗುಡಿಸಲಿನಂತೆ ಪ್ಲಾಸ್ಟಿಕ್ ಹೊದಿಕೆಯ ಸೂರಿನಡಿ ಕಾರ್ಯನಿರ್ವಹಿಸುತ್ತಿರುವ ಒಣ ಮೀನು ಮಾರಾಟ ಮಳಿಗೆಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಬಹುದಾಗಿದ್ದರೂ ಸಂಬಂಧ ಪಟ್ಟವರು ಆಸಕ್ತಿ ವಹಿಸುತ್ತಿಲ್ಲ ಎನ್ನುವ ಆರೋಪವಿದೆ.
ಬಳಕೆ ಇಲ್ಲದ ಮಳಿಗೆ ತಗ್ಗಿನಲ್ಲಿದ್ದು, ಮಳಿಗೆಯ ಅಂಚಿನ ಮಣ್ಣು ಜಾರಿದರೆ ಅಂಗಡಿ ಸಮೇತ ತಳ ಭಾಗಕ್ಕೆ ಕುಸಿಯುವ ಆತಂಕವಿದೆ. ಮಳೆಗಾಲದಲ್ಲಿ ಈ ಮಾರುಕಟ್ಟೆ ಕೆಸರಿನ ಕೊಳವಾಗುತ್ತದೆ. ಜೊತೆಗೆ ಈ ಮಳಿಗೆ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿದೆ. ಆದ್ದರಿಂದ ಜನರು ಮಾರುಕಟ್ಟೆ ಒಳಗೆ ಹೋಗು ವಾಗ ಜೀವ ಕೈಯಲ್ಲಿ ಹಿಡಿದು ತೆರಳಬೇಕಾದ ಪರಿಸ್ಥಿತಿ ಇದೆ. ಆದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪಾರಂಪರಿಕ ಕಟ್ಟಡ ಒಡೆ ಯುವುದೇ ಮುಖ್ಯ ಗುರಿಯಾಗಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.





