Mysore
23
overcast clouds
Light
Dark

ನೀರು ಕಲುಷಿತವಾಗುವುದನ್ನು ತಡೆಗಟ್ಟಿ : ಸಿಇಒ ಕೆ.ಎಂ.ಗಾಯಿತ್ರಿ

ಮೈಸೂರು: ಸಾರ್ವಜನಿಕವಾಗಿ ಬಳಕೆಯಾಗುವ ಕೊಳವೆ ಬಾವಿ, ಬೋರ್ ವೆಲ್, ಶುದ್ಧ ಕುಡಿಯುವ ನೀರು ಘಟಕಗಳ ಅಕ್ಕ ಪಕ್ಕ ಸ್ವಚ್ಛತೆಯನ್ನು ಕಾಪಾಡಿ ನೀರು ಕಲುಷಿತ ಆಗದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯಿತ್ರಿ ತಿಳಿಸಿದರು.

ತಿ ನರಸೀಪುರ ತಾಲ್ಲೂಕಿನ ಸೋಸಲೆ, ಬೆನಕನಹಳ್ಳಿ, ದೊಡ್ಡೇಬಾಗಿಲು ಗ್ರಾ. ಪಂ. ಯ ಹೊರಳಹಳ್ಳಿ, ಕೊಳತ್ತೂರು, ಚಿದರವಳ್ಳಿ ಹಾಗೂ ಉಕ್ಕಲಗೆರೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಅವರು ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಮೊದಲ ಆಧ್ಯತೆ ವಹಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವಂತಹ ಕೊಳವೆ ಬಾವಿಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಜಾನುವಾರು ಕುಡಿಯುವ ತೊಟ್ಟಿಗಳ ಹತ್ತಿರ ಕಡ್ಡಾಯವಾಗಿ ಸ್ವಚ್ಛತೆಯನ್ನು ಕಾಪಾಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಡದೆ ಊರಾಚೆ ಸಾಗಿಸಿ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ನೀರಿನ ಟ್ಯಾಂಕ್, ಬೋರ್ ವೆಲ್ ಗಳ ಸ್ವಚ್ಛತೆ ಹಾಗೂ ಶುದ್ಧತೆಗಾಗಿ ನೀರಿನ ಪರೀಕ್ಷೆಯನ್ನು ಕಾಲ ಕಾಲಕ್ಕೆ ಮಾಡುವಂತೆ ತಿಳಿಸಿದರು.

ಪ್ರತಿಯೊಬ್ಬ ನೀರುಗಂಟೆಗಳಿಂದ ನೀರು ಬಿಡುವ ಅವಧಿ, ಎಷ್ಟು ಮನೆಗಳಿವೆ ಎಂಬ ಮಾಹಿತಿ ಸಂಗ್ರಹಿಸಿ, ನೀರಿನ ಶುದ್ಧತೆ ಬಗ್ಗೆ ಈ ಮುಂಚೆ ತರಬೇತಿ ನೀಡಿದ್ದು, ಅದರಂತೆ ನೀರಿನ ಶುದ್ಧತೆ ಪರೀಕ್ಷಿಸಿ ನೀರು ಬಿಡಬೇಕು. ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಅರಿವು ಮೂಡಿಸಬೇಕು. ಕುಡಿಯುವ ನೀರನ್ನು ಕುದಿಸಿ ಆರಿಸಿ ಬಳಸುವಂತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿ. ಪಂ. ಉಪಕಾರ್ಯದರ್ಶಿ (ಆಡಳಿತ) ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಂಜಿತ್, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರ, ಸಹಾಯಕ ನಿರ್ದೇಶಕರು (ಗ್ರಾ.ಉ) ಶಶಿಕುಮಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಕೈಲಾಶ್ ಮೂರ್ತಿ, ಜೆಇ ಮಂಜುನಾಥ್, ಪಂಚಾಯತಿ ಅಭಿವೃಧ್ದಿ ಅಧಿಕಾರಿಗಳು, ಟಿ ಸಿ, ಟಿಎಇ, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.