ಮೈಸೂರು: ಕನ್ನಡ ಚಳುವಳಿ ಕೇಂದ್ರ ಸಮಿತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಆಚರಣೆ ಮಾಡಲಾಯಿತು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ 2015ರಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾದಾಗ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ರಾಜ್ಯದ ಜನರು ಅದರಲ್ಲೂ ಮೈಸೂರು ಜನರು ಅನ್ನ ತಿನ್ನುತ್ತಾ ಇರೋದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಿಂದ. ಅನ್ನ ವಿದ್ಯೆ ಕೊಟ್ಟೋರು ಕೃಷ್ಣರಾಜ ಒಡೆಯರ್. ನಾಡಿಗೆ ಆದರ್ಶಪ್ರಾಯ ವ್ಯಕ್ತಿ ಅಂದ್ರೇ ನಾಲ್ವಡಿ ಕೃಷ್ಣರಾಜ ಒಡೆಯರ್. ಕನ್ನಂಬಾಡಿ ಕಟ್ಟೆಯಿಂದ ಚಿತ್ರದುರ್ಗದ ತನಕ, ಮೈಸೂರಿನಿಂದ ಭದ್ರಾವತಿ ತನಕ, ಕೈಗಾರಿಕೆ ಎಲ್ಲವೂ ಕೂಡ ಕೃಷ್ಣರಾಜ ಒಡೆಯರ್ ಕೊಡುಗೆ.
ಅಂತಹವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಆಗ್ಬೇಕು ಎಂದು ಹೇಳಿದ್ದೆ. ರಾಜ್ಯಕ್ಕೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ಹಾಡಿ ಹೊಗಳಿದರು.
ಇನ್ನು ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೇಗೆ ದೇವರೋ, ನನಗೆ ಮೋದಿ ದೇವರು. ಅವರ ಹೆಸರಿನಲ್ಲಿ ನಾನು ಗೆದ್ದುಕೊಂಡು ಬಂದೆ. ನನ್ನ ಗೆಲುವಿನಲ್ಲಿ ಮೈಸೂರು-ಕೊಡಗು ಜನರ ಪಾತ್ರ ಮಹತ್ವದ್ದು. ಅಷ್ಟೇ ಮಹತ್ವದ ಪಾತ್ರ ಮೋದಿ ಅವರದ್ದು ಕೂಡ. ಅವರ 11 ವರ್ಷದ ಸಾಧನೆ ಕುರಿತು ಎಲ್ಲಾ ಕಡೆಯೂ ಪ್ರಚಾರ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಹೆಳವರಹುಂಡಿ ಸಿದ್ದಪ್ಪ, ಕನ್ನಡಪ್ರಭ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಸಂಧ್ಯಾ ಸುರಕ್ಷಾ ಟ್ರಸ್ಟ್ನ ಅಧ್ಯಕ್ಷ ನಟರಾಜ ಜೋಯಿಸ್, ಅಂತರಾಷ್ಟ್ರೀಯ ಹಿರಿಯ ಟೆನ್ನಿಸ್ ಆಟಗಾರ ಬಿ.ಎಸ್.ತುಳಸೀರಾಮ್, ಹರಿಹರ ಆನಂದಸ್ವಾಮಿ, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.