Mysore
23
overcast clouds
Light
Dark

ಭಾರೀ ಬಿರುಗಾಳಿ ಮಳೆಗೆ ಬುಡ ಸಮೇತ ಉರುಳಿದ ಅರಳಿ ಮರ; 4 ವಾಸದ ಮನೆಗಳು ಜಖಂ!

ವರುಣ : ತಡರಾತ್ರಿ ಸುರಿದ ಭಾರೀ ಬಿರುಗಾಳಿ, ಮಳೆಗೆ ಅರಳಿ ಮರವೊಂದು ಬೇರು ಸಮೇತ ಉರುಳಿದ ಪರಿಣಾಮ ಸಮೀಪದಲ್ಲಿದ್ದ ನಾಲ್ಕು ವಾಸುದ ಮನೆಗಳು ಜಖಂಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು
ತಾಲ್ಲೂಕಿನ ಬಸವನಪುರ ಗ್ರಾಮದಲ್ಲಿ ನಡೆದಿದೆ.

ಸಾಕಷ್ಟು ವರ್ಷಗಳ ಕಾಲದ ಬೃಹತ್ ಅರಳಿ ಮರ ಬಿದ್ದ ಪರಿಣಾಮ ಬಸವನಪುರ ಗ್ರಾಮದ ಸಿದ್ದರಾಜು, ಮೂಗಯ್ಯ, ಮಲ್ಲೇಶ್, ಚೆನ್ನೇಗೌಡ ಎಂಬುವವರ ಮನೆಗಳ ಮೇಲೆ ಉರುಳಿ ಬಿದ್ದಿದ್ದು ಕುಟುಂಬಸ್ಥರು ಮತ್ತು ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಯಾವುದೇ ಅವಘಡ ಸಂಭವಿಸಿಲ್ಲ. ಸ್ಥಳಕ್ಕೆ ನಂಜನಗೂಡಿನ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವರಾಜಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳು ಧಾವಿಸಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ್ದಾರೆ. ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಜಿಲ್ಲಾ ಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ತಡ ರಾತ್ರಿ ನಂಜನಗೂಡು ತಾಲೂಕಿನ ಹಲವು ಕಡೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯ ರಭಸಕ್ಕೆ ಬಸವನಪುರ ಗ್ರಾಮದಲ್ಲಿ ಸಾಕಷ್ಟು ವರ್ಷಗಳ ಹಳೆಯ ಕಾಲದ ಅರಳಿ ಮರ ಬುಡ ಸಮೇತ ಕುಸಿಯಿತು. ಮನೆಯಲ್ಲಿ ಕುಟುಂಬಸ್ಥರು ಜೊತೆಗೆ ಜಾನುವಾರುಗಳಿದ್ದರೂ ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ. ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಎಲ್ಲವನ್ನು ಸರಿಪಡಿಸಲು ಮುಂದಾಗಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಮತ್ತು ರೆವಿನ್ಯೂ ಅಧಿಕಾರಿಗಳ ಜೊತೆ ಸ್ಥಳಕ್ಕೆ ನಾನು ಭೇಟಿ ನೀಡುತ್ತೇನೆ ಹಾನಿಗೊಳಗಾದ ವಾಸದ ಮನೆಗಳಿಗೆ ಪರಿಹಾರ ನೀಡಲು ಮುಂದಾಗುತ್ತೇವೆ ಎಂದು ತಿಳಿಸಿದರು.

ಇನ್ನು ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದೇವರಾಜಯ್ಯ ಬಸವನಪುರ ಗ್ರಾಮದಲ್ಲಿ ತಡರಾತ್ರಿ ಸುರಿದ ಮಳೆ ಮತ್ತು ಗಾಳಿಯ ರಭಸಕ್ಕೆ ನಾಲ್ಕೈದು ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಈಗ ನಮ್ಮ ಇಲಾಖೆ ಸಿಬ್ಬಂದಿಗಳ ಜೊತೆಗೂಡಿ ಎಲ್ಲವನ್ನು ಸರಿಪಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.