ಮೈಸೂರು : ವಿದ್ಯುತ್ ಸೈನ್ ಬೋರ್ಡ್ ತೆರವುಗೊಳಿಸಲು ಹೋದ ವೇಳೆ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದ ಯುವಕನೋರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಆತನನ್ನು ರಕ್ಷಿಸಲು ಮುಂದಾದ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕು ನೇರಳಕುಪ್ಪೆ ಗ್ರಾಮದ ನಿವಾಸಿ ವೀರಭದ್ರಶೆಟ್ಟಿ ಎಂಬವರ ಮಗ ಸುನಿಲ್(೨೨) ಎಂಬಾತನೇ ಅವಘಡದಲ್ಲಿ ಮೃತಪಟ್ಟವರು. ನಗರ ಕುಂಬಾರಕೊಪ್ಪಲು ನಿವಾಸಿ ರಾಮು ಎಂಬವರ ಪುತ್ರ ಚಂದ್ರ ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿದ್ಯುತ್ ಕೆಲಸದ ವೃತ್ತಿಯಲ್ಲಿದ್ದ ಸುನಿಲ್, ಸೋಮವಾರ ಮಧ್ಯಾಹ್ನ ೫ ಗಂಟೆ ವೇಳೆಯಲ್ಲಿ ಜಯಲಕ್ಷ್ಮೀಪುರಂನಲ್ಲಿರುವ ಹೆಬಿಟೇಟ್ ಮಾಲ್ನಲ್ಲಿ ವಿದ್ಯುತ್ ಸೈನ್ ಬೋರ್ಡ್ ತೆರವುಗೊಳಿಸುವ ಕಾಮಗಾರಿಗೆಂದು ತೆರಳಿದ್ದರು.
ಕಟ್ಟಡದ ಮೇಲ್ಬಾಗಕ್ಕೆ ಹತ್ತಿದ ಸುನಿಲ್, ಬೋರ್ಡ್ ತೆರವುಗೊಳಿಸುವ ಸಲುವಾಗಿ ಅಲ್ಲಿ ಅಳವಡಿಸಲಾಗಿದ್ದ ಪಿಒಪಿ ಬಾರ್ ಮೇಲೆ ಕಾಲನ್ನು ಇಟ್ಟಿದ್ದಾರೆ. ಸೂಕ್ಷ್ಮವಾಗಿದ್ದ ಅದು ತಕ್ಷಣವೇ ಕುಸಿದಿದೆ. ಇದರಿಂದಾಗಿ ಆಯತಪ್ಪಿದ ಸುನಿಲ್ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚಲನಚಿತ್ರ ವೀಕ್ಷಿಸಲು ಬಂದಿದ್ದರು
ಘಟನೆಯಲ್ಲಿ ಗಾಯಗೊಂಡ ಚಂದ್ರು ಹೆಬಿಟೇಟ್ ಮಾಲ್ನಲ್ಲಿ ಚಲನಚಿತ್ರ ವೀಕ್ಷಿಸಲು ಬಂದಿದ್ದರು. ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಬೀಳುತ್ತಿದ್ದ ಸುನಿಲ್ನನ್ನು ಹಿಡಿದುಕೊಳ್ಳಲು ಹೋದ ಚಂದ್ರು ಕೂಡ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





