ಮೈಸೂರು : ಕೇಂದ್ರ ಸರ್ಕಾರದ ಯೋಜನೆಗಳ ಕುರಿತಾಗಿ ಮಾಹಿತಿ ಕೇಳಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅತೃಪ್ತಿ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಭೆಯಲ್ಲಿ ಹುಣಸೂರು ತಾಲ್ಲೂಕಿನ ಲಕ್ಷ್ಮಣತೀರ್ಥ ಸೇತುವೆ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಾರ್ಗದ ಕಾಮಗಾರಿ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿ ವಿವರಣೆ ನೀಡಲು ಮುಂದಾದರು. ಈ ವೇಳೆ ನಾನು ಅನೇಕ ಬಾರಿ ಮಾಹಿತಿ ಕೇಳಿದರೂ ಕೊಡುತ್ತಿಲ್ಲ. ಕಾಮಗಾರಿ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಕೈಗೆತ್ತಿಕೊಂಡಿ ರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿಲ್ಲ. ಕೆರೆಗಳ ಅಭಿವೃದ್ಧಿ ಮತ್ತು ಉದ್ಯಾನವನ ಅಭಿವೃದ್ಧಿ ಬಗ್ಗೆ ಡಿಪಿಆರ್ ತಯಾರಿಸುವ ಮುನ್ನ ಸಮಾಲೋಚನೆ ಮಾಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಮುನ್ನ ನೀವು ಒಂದು ಬಾರಿ ಚರ್ಚೆ ನಡೆಸಬೇಕು. ನಮಗೆ ಮಾಹಿತಿ ಇದ್ದರೆ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಸಂಪರ್ಕಿಸಿ ಒತ್ತಡ ತರಬಹುದು ಎಂದು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಸಂಸದರು ಮೃದುವಾಗಿದ್ದಾರೆ ಅಂತಲೋ ಅಥವಾ ಬೇರೆ ಕಾರಣಕ್ಕಾಗಿ ನೀವು ಹೀಗೆ ಮಾಡುತ್ತಿದ್ದೀರಾ? ನಿಮಗೆ ಎಷ್ಟು ಬಾರಿ ಕೇಳಬೇಕು ಎಂದು ಪ್ರಶ್ನಿಸಿದರು. ಈ ವೇಳೆ ಶಾಸಕ ಜಿ.ಡಿ.ಹರೀಶ್ಗೌಡ ಅವರು, ಸಂಸದರು ಮತ್ತು ನನ್ನೊಂದಿಗೆ ಚರ್ಚೆಯನ್ನೇ ಮಾಡಿಲ್ಲ. ಯುಜಿಡಿ ಸಮಸ್ಯೆ ಇದೆ. ಒಂದು ಕಡೆಯಿಂದ ಮತ್ತೊಂದು ಮಾರ್ಗಕ್ಕೆ ಹೋಗುವುದನ್ನು ತಪ್ಪಿಸಬೇಕಿದೆ. ನಮಗೆ ಬರುತ್ತಿರುವ ದೂರುಗಳಿಗೆ ಸ್ಪಂದಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ನಡೆಯುತ್ತಿರುವ ಸ್ವದೇಶಿ ದರ್ಶನ್ ಮತ್ತು ಚಾಮುಂಡಿಬೆಟ್ಟದ ಪ್ರಸಾದ್ ಯೋಜನೆಯ ಅನುಷ್ಠಾನದ ಸ್ಥಿತಿಗತಿಯ ಬಗ್ಗೆ ಇಲಾಖೆಯ ಅಽಕಾರಿಗಳು ಮಾಹಿತಿ ನೀಡದೇ ಇರುವುದಕ್ಕೆ ಸಂಸದ ಯದುವೀರ್, ಇಲಾಖೆಯ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದರೊಂದಿಗೆ ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅಧಿಕಾರಿಗಳು ನನ್ನ ಗಮನಕ್ಕೆ ತಾರದೇ ಕೈಗೊಂಡಿದ್ದಾರೆ ಎಂದು ಸಂಸದ ಸುನಿಲ್ ಬೋಸ್ ಸಹ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು, ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಬೇಕು. ಯಾವುದೇ ಡಿಪಿಆರ್ ಅಂತಿಮವಾಗುವ ಮುನ್ನ ಒಮ್ಮೆ ಭೇಟಿ ಮಾಡಿ ಚರ್ಚಿಸಿ ಸಲಹೆ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಹಂತದಲ್ಲಿ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸಿಫ್ ಮಾತನಾಡಿ, ಕೆರೆ ಅಭಿವೃದ್ಧಿ ಕ್ರಿಯಾ ಯೋಜನೆ ರೂಪಿಸಿರುವುದು ಹೊಸದಲ್ಲ. ಚುನಾವಣೆ ಮುನ್ನವೇ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈಗ ಮತ್ತೆ ಹೊಸದಾಗಿ ಕೆಲವು ಕೆರೆಗಳ ಪಟ್ಟಿಯನ್ನು ಮಾಡಲಾಗಿದ್ದು, ಶೀಘ್ರದಲ್ಲೇ ಪ್ರಸ್ತಾವನೆ ಕಳುಹಿಸಲಾಗುವುದು. ಅದೇ ರೀತಿ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಮ್ಯೂಸಿಯಂ ಮಾಡಲು ಡಿಪಿಆರ್ ಸಲ್ಲಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.