ಮೈಸೂರು : ವಿಶ್ವಕ್ಕೆ ಜಾಗತಿಕ ತಾಪಮಾನ ಕಾಡುತ್ತಿದ್ದು, ಹೊಸ ಹೊಸ ನೀತಿಗಳನ್ನು ಜಾರಿಗೆ ತರುವ ಮೂಲಕ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಿದೆ ಎಂದು ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮದ ಸಮನ್ವಯಾಧಿಕಾರಿ ಶೈಲೇಶ್ ಹರಿಭಕ್ತಿ ತಿಳಿಸಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಜ್ಞಾನ ಪಾಲುದಾರಿಕೆ ಎಂಬ ವಿಷಯದ ಬಗ್ಗೆ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮವನ್ನು ಭಾರತವು ಅನುಷ್ಠಾನಕ್ಕೆ ತಂದಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಳೆದ ಮೂರು ವರ್ಷದ ಹಿಂದೆ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳು ಮುನ್ನಲೆಗೆ ಬಂದವು. ಆದರೆ, ನಂತರ ಇದು ನಿಧಾನಗತಿಯಲ್ಲಿ ಸಾಗಲು ಶುರುವಾಯಿತು. ಆದರೆ, ಇದೀಗ ಮತ್ತೆ ಸುಸ್ಥಿರತೆ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಅದೈತ್ವ ಸಿದ್ಧಾಂತದಲ್ಲಿ ಶಂಕರಾಚಾರ್ಯರು ಸುಸ್ಥಿರ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಹಳ ಹಿಂದಿನ ಕಾಲದಿಂದಲೂ ಇದರ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಅರ್ಥಶಾಸಜ್ಞರು ಹೇಳುವ ಪ್ರಕಾರ ಅಭಿವೃದ್ಧಿ ವಿಚಾರದಲ್ಲಿರುವ ನಮ್ಮ ಗುರಿಯನ್ನು ಬದಲಾಯಿಸಿಕೊಳ್ಳಬೇಕಿದೆ. ಜಾಗತಿಕ ತಾಪಮಾನವನ್ನು ತಡೆದುಕೊಳ್ಳುವ ಶಕ್ತಿ ನಮ್ಮ ಪರಿಸರಕ್ಕೆ ಇಲ್ಲ. ಹಾಗಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ. ಅದಕ್ಕೆ ಬೇಕಾದ ಪಾಲಿಸಿಗಳನ್ನು ಜಾರಿಗೆ ತರಬೇಕಿದೆ ಎಂದು ಕಿವಿಮಾತು ಹೇಳಿದರು.





