Mysore
25
overcast clouds
Light
Dark

ಮೈಸೂರು: ಗಂಗೋತ್ರಿ ಕಾಮರ್ಸ್‌ ಕಟ್ಟಡದ ಮುಂದೆ ಧರೆಗುರುಳಿದ ಭಾರೀ ಮರದ ಕೊಂಬೆ

ಮೈಸೂರು: ನಗರದ ಗಂಗೋತ್ರಿ ಲೇಔಟ್‌ನಲ್ಲಿರುವ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ತಡ ರಾತ್ರಿ ಸುರಿದ ಭಾರೀ ಮಳೆಗೆ ಮರದ ಕೊಂಬೆಯೊಂದು ಮುರಿದು ಬಿದ್ದಿರುವುದು ಕಂಡುಬಂದಿದೆ.

ಗಂಗೋತ್ರಿ ಕ್ಯಾಂಪಸ್‌ನ ವಾಣಿಜ್ಯ ವಿಭಾಗದ ಮುಂಭಾಗದ ರಸ್ತೆ ಬದಿಯಲ್ಲಿರುವ ಬೃಹತ್‌ ಆಲದ ಮರದ ಕೊಂಬೆಯೊಂದು ಮುರಿದು ನಡು ರಸ್ತೆಯ ಮೇಲೆ ಬಿದ್ದಿದೆ. ಬೃಹದಾಕಾರದ ಕೊಂಬೆ ಇಡೀ ರಸ್ತೆಯನ್ನೇ ಆವರಿಸಿದೆ.

ಬೆಳಿಗ್ಗೆ 9.30 ಗಂಟೆಯಾದರು ಅದು ರಸ್ತೆಯಲ್ಲಿಯೇ ಬಿದ್ದಿದ್ದು, ಆ ರಸ್ತೆ ಮೂಲಕ ವಾಣಿಜ್ಯ ವಿಭಾಗ, ಗಣಿತ ಶಾಸ್ತ್ರ ವಿಭಾಗ, ಮಾನವಿಕ ಸಭಾಂಗಣ, ಗ್ರಂಥಾಲಯ ಸೇರಿದಂತೆ ವಿವಿಧ ಕಡೆಗಳಿಗೆ ಬದಲಿ ರಸ್ತೆ ಬಳಸಿ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ.

ಮರದ ಕೊಂಬೆ ಬಿದ್ದಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಕಾಲೇಜಿಗೆ ವಿದ್ಯಾರ್ಥಿಗಳು ಬಳಸುವ ರಸ್ತೆ ಮೇಲೆ ಮರದ ಕೊಂಬೆ ಬಿದ್ದಿದ್ದು, ಅದನ್ನು ಇನ್ನು ತೆರವುಗೊಳಿಸದೇ ಇರುವುದು ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೋಟ್‌:

ಕ್ಯಾಂಪಸ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಮಳೆ ಬಂದರೆ ರಸ್ತೆಯಲ್ಲಿಯೇ ನೀರು ನಿಲ್ಲುತ್ತಿದೆ. ಸಮರ್ಪಕ ಡ್ರೈನೇಜ್‌ ವ್ಯವಸ್ಥೆಯಿಲ್ಲ. ಮಳೆ ಬಂದರೇ ಮರದ ಕೊಂಬೆಗಳು ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ರಾತ್ರಿ ಸುರಿದ ಭಾರೀ ಮಳೆಗೆ ಮರದ ಕೊಂಬೆ ಮುರಿದು ಬಿದ್ದಿದೆ. ಇದರಿಂದ ಯಾರಿಗಾದರೂ ಹಾನಿಯಾಗಿದ್ದರೇ ಯಾರು ಹೊಣೆ. ಈ ಬಗ್ಗೆ ವಿವಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

-ಮನೋಜ್‌.ಎನ್‌, ಅಭಿವೃದ್ಧಿ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ.