ಮೈಸೂರು: ಬೆಂಗಳೂರು ಅರಮನೆ ಆಸ್ತಿ ವಿಚಾರಲ್ಲಿ ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ ಎಂದು ಮಾಹಿತಿ ಬಂದಿದ್ದು, ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿ ನಾವು ಕೂಡ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಟಿಡಿಆರ್ ಕೊಟ್ಟು ರಸ್ತೆ ಮಾಡಿ ಎಂದು ಆದೇಶ ನೀಡಿದೆ. ಅದನ್ನು ತಪ್ಪಿಸಲು ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದ್ದಾರೆ. ನಾವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತೇವೆ ಎಂದರು.
ನಗರದ ಪಾರಂಪರಿಕ ಕಟ್ಟಡಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡಿ ಉಳಿಸಿಕೊಳ್ಳಬೇಕು. ಕಳೆದ ೧೦೦ ವರ್ಷಗಳಿಂದ ಅಲ್ಲಿ ಯಾವುದೇ ನಿರ್ವಹಣೆ ಮಾಡಿರಲಿಲ್ಲ. ಪ್ರತಿ ಪಾರಂಪರಿಕ ಕಟ್ಟಡಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡಬೇಕು. ನಗರದ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳಿಗೆ ಈಗಾಗಲೇ ನಿರ್ವಹಣೆ ಕಾರ್ಯ ಪ್ರಾರಂಭ ಮಾಡಬೇಕು, ಅವುಗಳನ್ನು ಉಳಿಸಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳನ್ನು ಕೆಡವಿ ಮತ್ತೆ ಕಟ್ಟುವುದಕ್ಕೆ ನಮ್ಮ ವಿರೋಧವಿದೆ. ಎಲ್ಲ ಕಟ್ಟಡಗಳ ನಿರ್ವಹಣೆ ಮಾಡಿದರೆ ಸಾಕು. ಈ ವಿಚಾರದಲ್ಲಿ ಸರ್ಕಾರ ಬೇಗ ನಿರ್ಧಾರ ಮಾಡಬೇಕು ಎಂದು ಹೇಳಿದರು.