Mysore
21
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಮಂಡ್ಯ : ಮಾಜಿ ಸಚಿವ ಪುಟ್ಟರಾಜು ವಿರುದ್ದ ಗಂಗಾಧರ್‌ ಕಿಡಿ

ಮಂಡ್ಯ: ಸರ್ಕಾರಿ ಅಧಿಕಾರಿಯನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಗುಮಾಸ್ತ ಎಂದಿರುವ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪುಡಿರೌಡಿಗಳ ರೀತಿ ಹೇಳಿಕೆ ನೀಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಹಾಗೂ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಕಿಡಿ ಕಾರಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂಬರಲಿರುವ ಮನ್‌ಮುಲ್ ಚುನಾವಣೆಯಲ್ಲಿ ಸೋಲಿನ ಹತಾಷೆಯಲ್ಲಿ ಸಿಲುಕಿರುವ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸರ್ಕಾರಿ ಅಧಿಕಾರಿ ಮೇಲೆ ಅಪವಾದ ಹೊರಿಸಿ ಪ್ರತಿಭಟನೆ ಮಾಡಿದ್ದಾರೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದಲ್ಲಿ ಅದರ ವಿರುದ್ಧ ಕಾನೂನು ಹೋರಾಟ ಮಾಡಬೇಕು ಅದನ್ನು ಹೊರತುಪಡಿಸಿ ಅಧಿಕಾರಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಅಧಿಕಾರಿಯನ್ನು ಅಟ್ಟಾಡಿಸಿಕೊಂಡು ಓಡಿಸುವ ಹೇಳಿಕೆ ನೀಡಿ ದೌರ್ಜನ್ಯ, ದಬ್ಬಾಳಿಕೆ, ಬೆದರಿಕಯನ್ನು ಒಡ್ಡಿದ್ದು ಇದಕ್ಕೆ ಹೆದರುವುದಿಲ್ಲ ಎಂದು ಹೇಳಿದರು.

ಸರ್ಕಾರಿ ಸಂಸ್ಥೆ ಹಾಗೂ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ನಾಶಮಾಡುವ ಜೆಡಿಎಸ್‌ನವರು ಹಿಂದೆ ಮನ್‌ಮುಲ್ ಆಡಳಿತವನ್ನು ಸೂಪರ್ ಸೀಡ್ ಮಾಡಿದ್ದರು. ೨೦೧೬ರಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ೩೦ ತಿಂಗಳೂ ಕಾಯವುದೇ ಸಾಮಾನ್ಯ ಸಭೆ ನಡೆಯದೇ ಅಭಿವೃದ್ಧಿ ಕಾರ್ಯಗಳನ್ನು ನಾಶ ಮಾಡುವ ಸಂಸ್ಕೃತಿ ಹೊಂದಿದ್ದಾರೆ. ಇಂತಹ ದೌರ್ಜನ್ಯ, ದಬ್ಬಾಳಿಕೆ ಮಾಡುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇಲ್ಲ ಎಂದು ಕೆಂಡ ಕಾರಿದರು.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅನಗತ್ಯ ಹೇಳಿಕೆ ನೀಡಿ ಪ್ರತಿಭಟನೆ ನಡೆಸುತ್ತಿದ್ದು, ವಿರೋಧ ಪಕ್ಷದಲ್ಲಿ ನಿಂತು ಆಡಳಿತ ನಡೆಸುತ್ತಿರುವವರು ಉತ್ತರ ನೀಡಲು ತಡಕಾಡುವಂತಹ ಹೇಳಿಕೆ ನೀಡಲು ಮುಂದಾಗಬೇಕು. ಇಲ್ಲವಾದರೆ ಆರೋಪಗಳು ಸತ್ಯವಾದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಮುಂದಾಗಬೇಕು ಎಂದು ತಾಕೀತು ಮಾಡಿದರು.

ಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ನಹೀಮ್, ಕಾಂಗ್ರೆಸ್ ನಗರ ಅಧ್ಯಕ್ಷ ರುದ್ರಪ್ಪ, ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ಶ್ರೀಧರ್, ವಿಜಯ್‌ಕುಮಾರ್, ನಾಗರಾಜು, ರಾಮಚಂದ್ರು, ಅಪ್ಪಾಜಿಗೌಡ, ಶಿವಲಿಂಗೇಗೌಡ ಇದ್ದರು.

Tags: