ಮದ್ದೂರು : ನಗರದಲ್ಲಿ ಭಾನುವಾರ ಸಂಜೆ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ನಡೆದ ಕಲ್ಲು ತೂರಾಟ ಘಟನೆ ಪೂರ್ವಯೋಜಿತ ಕೃತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಭೆ ನಡೆಸಲೆಂದೆ ಪಕ್ಕದ ಚನ್ನಪಟ್ಟಣದಿಂದ ಮೂವರು ಅನ್ಯಕೋಮಿನ ಕಿಡಿಗೇಡಿಗಳು ಬಂದಿದ್ದರು, ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ೨೧ ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ಚನ್ನಪಟ್ಟಣದಿಂದ ಬಂದಿದ್ದ ಮೂವರು ಇದ್ದಾರೆ. ಈದ್ ಮಿಲಾದ್ ಹಬ್ಬಕ್ಕೆ ಊಟಕ್ಕೆಂದು ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಸ್ಥಳೀಯರು ಕೂಡ ಇದೇ ಆರೋಪ ಮಾಡಿದ್ದಾರೆ ಎಂದರು.
ಕಲ್ಲು ತೂರಾಟದ ವೇಳೆ ಬೀದಿ ದೀಪವನ್ನು ಆರಿಸಲಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾವುದೇ ಸಮುದಾಯದವರು ತಪ್ಪು ಮಾಡಿದ್ದರೂ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಎರಡು ದಿನಗಳು ನಿಷೇಧಾಜ್ಞೆ
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮದ್ದೂರು ಪಟ್ಟಣದಲ್ಲಿ ಎರಡು ದಿನಗಳು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಪಟ್ಟಣದಾದ್ಯಂತ ಪೊಲೀಸರ ಹೈ ಅಲರ್ಟ್ ಮಾಡಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಪಥಸಂಚಲನ ನಡೆಸಲಾಯಿತು.





