ಮಂಡ್ಯ : ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಸಬಲೀಕರಣ ಮಾಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಹೇಳಿದರು.
ಇಂದು (ಮಾ.28) ಮದ್ದೂರು ತಾಲ್ಲೂಕು ಮೈದಾನದಲ್ಲಿ ಜಿಲ್ಲಾ ಪಂಚಾಯತ್, ಮಂಡ್ಯ ತಾಲ್ಲೂಕು ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಸಂಜೀವಿನಿ ತಾಲ್ಲೂಕು ಮಟ್ಟದ ಒಕ್ಕೂಟ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧಾನೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದ ಸಚಿವರು ಹೆಣ್ಣು ಮಕ್ಕಳನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಸರ್ಕಾರ ಪ್ರಮುಖ ಉದ್ದೇಶ, ಆದ್ದರಿಂದಲೇ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಗಿದೆ ಎಂದರು.
ಸ್ಥಳೀಯ ಮಟ್ಟದ ರಾಜಕೀಯದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಪಾಲ್ಗೊಂಡು ಯಶಸ್ವಿಯಾಗಿ ಉನ್ನತ ಮಟ್ಟದ ರಾಜಕೀಯಕ್ಕೆ ಪ್ರವೇಶ ಪಡೆಯಬೇಕು. ಮಹಿಳೆಯರು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿ ಬದುಕುಬೇಕು. ಇಂದು ಹೆಣ್ಣು ಮಕ್ಕಳು ಗಂಡಸರಿಗೆ ಸರಿಸಮನಾರಗಿ ಜೀವನ ನಡೆಸುತ್ತಿದ್ದಾರೆ. ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದರು ಇಂದು ಮಹಿಳೆಯರ ಪ್ರಾತಿನಿಧ್ಯ ಇಲ್ಲದೆ ಇರುವ ಹುದ್ದೆಯೇ ಇಲ್ಲ ಎಂದು ಹೇಳಿದರು.
ಹಾಲಿನ ದರ ಏರಿಕೆ ಸಮರ್ಥಿಸಿದ ಸಚಿವ
ರಾಜ್ಯದಲ್ಲಿ ಪ್ರತಿನಿತ್ಯ 90 ಲಕ್ಷ ದಿಂದ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ವರ್ಷಕ್ಕೆ ರೂ 1500 ಕೋಟಿಯನ್ನು ಹಾಲು ಉತ್ಪಾದಕರ ಸಾಹಯಧನಕ್ಕೆ ಮೀಸಲಿಟ್ಟಿದೇವೆ. ಹಾಲಿನ ದರದ ಮೇಲೆ ಹೆಚ್ಚಿನ 4 ರೂಪಾಯಿಯನ್ನು ಯಾವುದೇ ಯೂನಿಯನ್ ಅಥವಾ ಸರ್ಕಾರ ಇಟ್ಟುಕೊಳ್ಳುವುದಿಲ್ಲ. 4 ರೂಪಾಯಿಯನ್ನು ಹಾಲು ಉತ್ಪಾದಕರಿಗೆ ನೀಡಬೇಕು ಎಂದು ಕ್ಯಾಬಿನೆಟ್ನಲ್ಲಿ ನಿರ್ಧಾರಿಸಲಾಗಿದೆ. 4 ರೂಪಾಯಿ ಹೆಚ್ಚಾದರು ನೆರೆ ರಾಜ್ಯಗಳಿಗೆ ಹೋಲಿಸಿದರೂ ನಮ್ಮ ರಾಜ್ಯದಲ್ಲೇ ಕಡಿಮೆ ದರದಲ್ಲಿ ಹಾಲು ದೊರೆಯುತ್ತಿರುವುದು ಎಂದು ತಿಳಿಸಿದರು.
ಮದ್ದೂರು ಶಾಸಕ ಕೆ.ಎಂ ಉದಯ್ ಕುಮಾರ್ ಅವರು ಮಾತನಾಡಿ, ಯಾವುದೇ ಕಾಲೇಜಿನ ಫಲಿತಾಂಶ ನೋಡಿದರೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿರುತ್ತಾರೆ. ಅಂತೆಯೇ ಉನ್ನತ ಹುದ್ದೆಗಳಾದ ಐ ಎ ಎಸ್, ಐ ಪಿ ಎಸ್ ನಂತಹ ಉದ್ಯೋಗವನ್ನು ಅಲಂಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲೂ ಸಿಂಹಪಾಲು ಮಹಿಳೆಯರದ್ದೆ ಆಗಿರುತ್ತದೆ ಎಂದು ಹೇಳಿದರು.
ನಂತರ ಸಚಿವರು ಶಾಸಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್. ನಂದಿನಿ, ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಅನಿತಾ ಲಕ್ಷ್ಮಿ, ಸುದೀರ್ ಕುಮಾರ್, ರಾಮಲಿಂಗಯ್ಯ, ಡಾ. ಮನೋಹರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.