Mysore
25
scattered clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪ ಪ್ರಕರಣ | ಸಿಬ್ಬಂದಿಗಳಿಂದಲೇ ಕೃತ್ಯ ; ಇಬ್ಬರ ಬಂಧನ

ಬೆಂಗಳೂರು : ಐಪಿಎಲ್ ಪಂದ್ಯಗಳ ವೇಳೆ ಭದ್ರತೆ ನಿರ್ವಹಣೆಗಾಗಿ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸುವ ಮೂಲಕ ಆತಂಕ ಸೃಷ್ಟಿಸಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದ ಉಪವಿತರಕ ಸಂಸ್ಥೆಯ ಸಿಬ್ಬಂದಿಗಳಾದ ಇ.ಮಂಜುನಾಥ್ ಹಾಗೂ ಅಬ್ದುಲ್ ಕಲಾಂ ಬಂಧಿತರು. ಆರೋಪಿಗಳನು ವಿಚಾರಣೆಗೊಳಪಡಿಸಿದಾಗ ಕೃತ್ಯದ ಹಿಂದೆ ತೀರಾ ವೈಯಕ್ತಿಕ ಹಾಗೂ ವಿಚಿತ್ರ ಕಾರಣವಿರುವುದು ಬಹಿರಂಗವಾಗಿದೆ.

ಏ.24ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಯ ಮೇಲ್ವಿಚಾರಣೆಗಾಗಿ ಅಳವಡಿಸಲಾಗಿದ್ದ 240 ಸಿಸಿಟಿವಿ ಕ್ಯಾಮೆರಾಗಳ ಫೀಡ್ ಏಕಾಏಕಿ ಆಫ್ ಆಗಿತ್ತು. ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ಇದ್ದಕ್ಕಿದ್ದಂತೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಲೋಪವಾಗಿರುವುದು ಪೊಲೀಸರ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಪರಿಶೀಲನೆ ನಡೆಸಿದಾಗ ಇದು ತಾಂತ್ರಿಕ ದೋಷವಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ದುಷ್ಕೃತ್ಯ ಎಂಬುದು ಬಯಲಾಗಿತ್ತು.

ಸಂಸ್ಥೆಯ ಮೇಲಿನ ಸಿಟ್ಟಿಗೆ ಕೃತ್ಯ
ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ತಮ್ಮ ಸಂಸ್ಥೆಯ ಮೇಲಿನ ಸಿಟ್ಟಿಗೆ ಈ ರೀತಿ ಕೃತ್ಯ ಎಸಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆಯಯನ್ನ ಐವಿಎಸ್ ಡಿಜಿಟಲ್ ಸಲ್ಯೂಷನ್ಸ್ ಎಂಬ ಉಪವಿತರಕ ಸಂಸ್ಥೆಗೆ ನೀಡಲಾಗಿತ್ತು. ಕಂಪೆನಿಯಿಂದ ಬರಬೇಕಿದ್ದ ವೇತನ ಬಾಕಿಯಿದ್ದುದರಿಂದ ಕೋಪದಿಂದ ಕೃತ್ಯ ಎಸಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಪಂದ್ಯದ ದಿನ ತಮ್ಮ ಬಳಿಯಿದ್ದ ನಿಷ್ಕ್ರಿಯಗೊಂಡ ಹಳೆಯ ಐಡಿ ಕಾರ್ಡ್‌ಗಳನ್ನು ಬಳಸಿ ಕ್ರೀಡಾಂಗಣದೊಳಗೆ ಪ್ರವೇಶಿಸಿದ್ದಾರೆ. ನಂತರ ನೇರವಾಗಿ ಸಿಸಿಟಿವಿ ಸರ್ವರ್ ರೂಂಗೆ ತೆರಳಿ ಅಲ್ಲಿನ ಎನ್‌ವಿಆರ್ (ನೆಟ್ ವಿಡಿಯೋ ರೆಕಾರ್ಡರ್) ಮತ್ತು ಫೈಬರ್ ಕನೆಕ್ಷನ್‌ಗಳನ್ನು ಕಡಿತಗೊಳಿಸಿದ್ದರು. ಇದರಿಂದ ಪ್ರವೇಶ ದ್ವಾರಗಳ ಕ್ಯಾಮೆರಾಗಳು, ಕ್ರೀಡಾಂಗಣದ ಸುತ್ತಮುತ್ತಲಿನ ಕ್ಯಾಮೆರಾಗಳು, ಡಿ ಕಾರ್ಪೊರೇಟ್ ಸ್ಟ್ಯಾಂಡ್ ಮತ್ತಿತರ ಭಾಗಗಳ ದೃಶ್ಯಾವಳಿಗಳ ಫೀಡ್ ಸ್ಥಗಿತವಾಗಿತ್ತು. ಸಿಸಿಟಿವಿ ದೃಶ್ಯಗಳು ಬಂದ್ ಆಗಿದ್ದರಿಂದ ಭದ್ರತಾ ಮೇಲ್ವಿಚಾರಣೆಯಲ್ಲಿ ಭಾರೀ ಹಿನ್ನಡೆಯಾಗಿತ್ತು. ಆದರೂ ಪಟ್ಟುಬಿಡದ ಪೊಲೀಸರು, ವಿಷಯ ತಿಳಿಯುತ್ತಿದ್ದಂತೆಯೇ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿ, ತಕ್ಷಣವೇ ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧಪಡಿಸಿ ಪಂದ್ಯದ ಭದ್ರತೆ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದರು.

 

Tags:
error: Content is protected !!