Mysore
27
clear sky

Social Media

ಮಂಗಳವಾರ, 21 ಜನವರಿ 2025
Light
Dark

ಅಂಗನವಾಡಿ ಕೇಂದ್ರಗಳು ಅಭಿವೃದ್ಧಿ ಹೊಂದಲಿ: ಆನಂದ್

ಮಂಡ್ಯ: ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಾಗಲು ಪೂರಕವಾದ ವಾತವರಣ ಸೃಷ್ಠಿಸಬೇಕು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಆನಂದ್ ಹೇಳಿದರು.

ಶನಿವಾರ(ಜು.6) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿ ಪ್ಲೇ ಹೋಂ, ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೋಲಿಕೆ ಮಾಡಿದರೆ ಸರ್ಕಾರಿ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಕೃಷಿಕರು ಇರುವುದರಿಂದ ಮಕ್ಕಳನ್ನು ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುತ್ತಾರೆ‌. ಹೀಗಾಗಿ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಾಗಬೇಕು ಮಕ್ಕಳಿಗೆ ಪೌಷ್ಟಿಕ ಆಹಾರ, ಸ್ವಚ್ಛವಾದ ವಾತವರಣವನ್ನು ಸೃಷ್ಟಿಸಬೇಕು ಸರ್ಕಾರಿ ಅಂಗನವಾಡಿ ಕೇಂದ್ರಗಳು ಯಾವುದರಲ್ಲು ಕಮ್ಮಿ ಇಲ್ಲ ಎಂಬಂತೆ ಇರಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 2558 ಅಂಗನವಾಡಿಗಳು ಇದ್ದು ಅದರಲ್ಲಿ ಸ್ವಂತ ಕಟ್ಟಡ 1769, ಪಂಚಾಯತಿ ಕಟ್ಟಡ 31, ಸಮುದಾಯ ಕಟ್ಟಡ 66, ಬಾಡಿಗೆ ಕಟ್ಟಡ 222, ಶಾಲಾ ಕಟ್ಟಡ 311, ಬಾಡಿಗೆ ರಹಿತ ಕಟ್ಟಡಗಳು 157 ಕಾರ್ಯನಿರ್ವಹಿಸುತ್ತಿರುತ್ತದೆ ಎಂದರು.

ಜೂನ್ 2024 ರಿಂದ ಮಂಡ್ಯ ಜಿಲ್ಲೆಯ ಸುಮಾರು 20 ಅಂಗನವಾಡಿಗಳಿಗೆ ಭೇಟಿ ನೀಡಿದ್ದು, ಅವುಗಳಲ್ಲಿ ಕೆಲವೊಂದು ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ ಹಾಗೂ ಕೆಲವೊಂದು ಸರ್ಕಾರಿ ಶಾಲಾ ಕಾಂಪೌಂಡ್ ನಲ್ಲಿ ನಡೆಯುತ್ತಿದೆ.

ಕೆಲವು ಅಂಗನವಾಡಿಗಳಲ್ಲಿ ಸರ್ಕಾರದಿಂದ ನೀಡುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಸುಸಜ್ಜಿತ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು, ಹಾಗೂ ಅಡುಗೆ ಮಾಡಲು ಉಪಯೇಗಿಸುವ ಪಾತ್ರೆಗಳು ಹಳೆದಾಗಿದ್ದು ಅವುಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗಿದೆ. ಹಳೆಯದಾದ ಶೌಚಾಲಯ, ದುರಸ್ತಿ ಕೆಲಸಗಳು ಅಂಗನವಾಡಿಯ ಸುತ್ತಮುತ್ತಲು ಶುಚಿತ್ವ ಕಾಪಾಡಿಕೊಳ್ಳಲು ಹಾಗೂ ಖಾಲಿ ಇರುವ ಕಡೆ ಅಂಗನವಾಡಿ ಸಹಾಯಕಿಯರ ನೇಮಕ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತಿಳಿಸಲಾಗಿದೆ ಎಂದರು.

ಮಕ್ಕಳಿಗೆ ಅನ್ನ ಬೇಳೆ ಸಾಂಬಾರು, ಮಿಲೆಟ್ ಲಾಡು, ಗೋಧಿ ನುಚ್ಚಿನ ಉಪ್ಪಿಟ್ಟು ಹಾಗೂ ಮೊಟ್ಟೆ ನೀಡುತ್ತಿದ್ದಾರೆ. ಬಾಣಂತಿಯರಿಗೂ ಸಹ ಮೊಟ್ಟೆ ನೀಡಲಾಗುತ್ತಿದೆ. ಅಂಗನವಾಡಿಗಳ ಮೂಲ ಭೂತ ಸೌಕರ್ಯಗಳನ್ನು ಹಾಗೂ ಶುಚಿತ್ವವನ್ನು ಕಾಪಾಡಿಕೊಂಡರೆ ಹೆಚ್ಚು ಮಕ್ಕಳನ್ನು ಅಂಗನವಾಡಿಗೆ ಸೇರಿಸಲು ಪೋಷಕರು ಆಸಕ್ತಿ ತೋರುವ ಸಾಧ್ಯತೆಯಿರುತ್ತದೆ ಎಂದರು.

ನಿರ್ಮಾಣ ಹಂತದಲ್ಲಿರುವ ಅಂಗನವಾಡಿಗಳ ಕಾಮಗಾರಿಯನ್ನು ವಿಳಂಬ ಮಾಡದೆ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಹೇಳಿದರು.

Tags: