ಮಡಿಕೇರಿ : ಜಮ್ಮಾ, ಸಿ ಮತ್ತು ಡಿ ಲ್ಯಾಂಡ್ ಹಾಗೂ ವನ್ಯಜೀವಿ ಸಂಘರ್ಷಗಳ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆರವರ ಕಚೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ.ಮಂಥರ್ ಗೌಡ ಅವರುಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಜಮ್ಮಾಮಲೆ ಹಿಡುವಳಿದಾರರ ಆಸ್ತಿ ಹಕ್ಕು ರಕ್ಷಣೆ ಮಾಡಬೇಕು. ಈ ಬಗ್ಗೆ ಶ್ರೀಘ್ರವಾಗಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಸಚಿವರು ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಸಿ ಮತ್ತು ಡಿ ಲ್ಯಾಂಡ್ ಬಗ್ಗೆ ಜಂಟಿ ಸರ್ವೆ ಮಾಡಿ ಹಿಡುವಳಿದಾರರಿಗೆ ನ್ಯಾಯ ಒದಗಿಸಬೇಕು. ಕೊಡಗು ಜಿಲ್ಲೆಯಲ್ಲಿ ಆನೆಗಳ ಹಾವಳಿಯಿಂದ ಮಾನವ-ಪ್ರಾಣ ಹಾನಿಯನ್ನು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಬೇಕು, ಆನೆ, ಹುಲಿಗಳ ನಿರಂತರ ದಾಳಿಯಿಂದ ಕೊಡಗಿನ ರೈತಾಪಿ ಜನರ ಜೀವ ಹಾನಿ ಉಂಟಾಗುತ್ತಿದೆ. ಜೊತೆಗೆ ಕೃಷಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹುಲಿ ಮತ್ತು ಆನೆಗಳನ್ನು ಸ್ಥಳಾಂತರಿಸಿ ಜೀವ ಹಾನಿ ಉಂಟಾಗುವುದನ್ನು ಅಧಿಕಾರಿಗಳು ಶೀಘ್ರವಾಗಿ ತಡೆಗಟ್ಟಬೇಕೆಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಚಿವರು ಇದಕ್ಕೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಕೂಡಲೇ ಮಾನವನ ಪ್ರಾಣ ಹಾನಿಯಾಗದಂತೆ ಕ್ರಮ ವಹಿಸಿ, ಜನರಿಗೆ ಧೈರ್ಯ ತುಂಬಬೇಕು. ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅರಿವು ಮಾಡಿಸಲು ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.
ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಜಮ್ಮಾಮಲೆ ಅಸೋಷಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.





