ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಬಿಸಿಲಿನ ಝಳಕ್ಕೆ ಮನುಷ್ಯರು ಬಸವಳಿದಂತೆ ವನ್ಯಜೀವಿಗಳು ಕಂಗಲಾಗಿವೆ. ಅದರಂತೆ, ಬಿಸಿಲಿನ ತಾಪಮಾನದ ಬೇಗೆಗೆ ಕಾಡಾನೆಗಳು ತತ್ತರಿಸಿ ಹೋಗಿದ್ದು, ಕುಡಿಯುವ ನೀರಿಗಾಗಿ ಗುಂಪು ಗುಂಪಾಗಿ ಹತ್ತಕ್ಕೂ ಹೆಚ್ಚು ಆನೆಗಳು ರಸ್ತೆ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯ ವ್ಯಾಪ್ತಿಯ ನೆಲ್ಲೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಪಾಲಾರ್ ಹಳ್ಳಕ್ಕೆ ನೀರು ಕುಡಿಯಲು ತೆರಳುತ್ತಿರುವುದನ್ನ ದ್ವಿಚಕ್ರ ವಾಹನ ಸವಾರರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಕಾಡಾನೆಗಳ ಪರದಾಟ ವೀಡಿಯೋದಲ್ಲಿ ಸೆರೆಯಾಗಿದೆ.
ಪಾಲಾರ್ ಹಳ್ಳದ ಗುಂಡಿಯಲ್ಲಿರುವ ನೀರು ಕುಡಿದ ಕಾಡಾನೆಗಳು ತನ್ನ ಮರಿಗಳೊಂದಿಗೆ ಸ್ವಚ್ಛಂದವಾಗಿ ಕಾಲ ಕಳೆಯುತ್ತಿರುವುದನ್ನು ಜೆಸಿಬಿ ಚಾಲಕರೊಬ್ಬರು ವಿಡಿಯೋ ಮಾಡಿದ್ದಾರೆ. 10 ಆನೆಗಳ ಪೈಕಿ ಮೂರು ಮರಿಗಳಿದ್ದು, ಸುಮಾರು 35 ನಿಮಿಷಕ್ಕೂ ಹೆಚ್ಚಿನ ಸಮಯ ಹಳ್ಳದಲ್ಲಿ ಮರಿಗಳೊಂದಿಗೆ ವಿಶ್ರಮಿಸಿದೆ. ಬೇಸಿಗೆ ಸಮಯದಲ್ಲಿ ಕೆಸರು, ಮಣ್ಣಿನ ಮಜ್ಜನ ಮಾಡುವ ಆನೆಗಳ ದೃಶ್ಯವನ್ನು ಜೆಸಿಬಿ ಚಾಲಕರೊಬ್ಬರು ಕಣ್ತುಂಬಿಕೊಂಡಿದ್ದಾರೆ.
” ಪಾಲಾರ್ ಹಳ್ಳಕ್ಕೆ ಪ್ರತಿದಿನ ಆನೆಗಳು ನೀರು ಕುಡಿಯಲು ಹೋಗುವುದು ಸಾಮಾನ್ಯ. ಆದರೆ ಸೋಮವಾರ ಸಂಜೆ ಹತ್ತಕ್ಕೂ ಹೆಚ್ಚು ಆನೆಗಳು ಏಕಕಾಲದಲ್ಲಿ ನೀರು ಕುಡಿಯಲು ತೆರಳಿರುವುದು ಇದೆ ಮೊದಲು. ಹೂಗ್ಯಂ ವಲಯ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೂಗ್ಯಂ ವಲಯ ಅರಣ್ಯಾಧಿಕಾರಿ ಜಿತೇಂದ್ರ ಮಾಹಿತಿ ನೀಡಿದ್ದಾರೆ.





