Mysore
28
broken clouds

Social Media

ಶನಿವಾರ, 13 ಜೂನ್ 2026
Light
Dark

ಬೇಗೂರು-ಹೆಡಿಯಾಲ ಸಂಪರ್ಕ ರಸ್ತೆ ಸ್ಥಗಿತ

ಸೇತುವೆ ಕಾಮಗಾರಿ ಹಿನ್ನೆಲೆ; ಬದಲಿ ಮಾರ್ಗ, ಭಾರೀ ವಾಹನಗಳ ಸಂಚಾರಕ್ಕೆ ಗ್ರಾಮಸ್ಥರ ವಿರೋಧ

ಶೇಖರ್.ಆರ್.ಬೇಗೂರು
ಬೇಗೂರು: ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೭೬೬ರ ಮೂಲಕ ಹೆಡಿಯಾಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ (೮೬)ರ ಕೋಟೆಕೆರೆ ಗೇಟ್ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆ ಸೂಚನೆಯಂತೆ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಆದರೆ ಗ್ರಾಮಸ್ಥರು ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡದ ಕಾರಣದಿಂದ ವಾಹನ ಸವಾರರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಮತ್ತು ಬಿಗುವಿನ ವಾತಾವರಣ ಪ್ರತಿನಿತ್ಯ ಮಾಮೂಲಿಯಾಗಿದೆ.

ಬದಲಿ ರಸ್ತೆ : ರಾಜ್ಯ ಹೆದ್ದಾರಿ (೮೬)ಯ ಕೋಟೆಕೆರೆ ಗೇಟ್ ಬಳಿ ಸೇತುವೆ ಕುಸಿದಿದ್ದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ನೂತನವಾಗಿ ಸೇತುವೆ ನಿರ್ಮಾಣ ಮಾಡಲು ೨೦ ದಿನಗಳಿಂದ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಹೊರೆಯಾಲ, ಯಡವನಹಳ್ಳಿ ಮಾರ್ಗವಾಗಿ ಮತ್ತು ಬೇಗೂರು ಕೋಟೆಕೆರೆ ಮಾರ್ಗವಾಗಿ ಹೆಡಿಯಾಲ ರಸ್ತೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಗ್ರಾಮಸ್ಥರ ವಿರೋಧ: ಈ ಮಾರ್ಗವಾಗಿ ವಾಹನಗಳು ಸಂಚರಿಸುವುದರಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿವೆ. ೪೦ ಟನ್‌ಗೂ ಹೆಚ್ಚ ಭಾರ ಹೊತ್ತ ಕಲ್ಲು ಕ್ವಾರಿಯ ಲಾರಿಗಳು ಸಂಚರಿಸುವುದರಿಂದ ಸೇತುವೆ ಕಾಮಗಾರಿ ಪೂರ್ಣಗೂಳ್ಳುವುದರೊಳಗೆ ಗ್ರಾಮಗಳ ರಸ್ತೆ ಸಂಪೂರ್ಣ ಹಾಳಾಗುತ್ತವೆ. ಆದ್ದರಿಂದ ವಾಹನಗಳು ಸಂಚರಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದು ವಾಹನಗಳನ್ನು ತಡೆದು ವಾಪಸ್ ಕಳುಹಿಸಿದ್ದಾರೆ.

ತಾತ್ಕಾಲಿಕ ರಸ್ತೆ ನಿರ್ಮಿಸಲಿ : ಸೇತುವೆಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಈ ಮಾರ್ಗವಾಗಿ ಹೆಡಿಯಾಲ- ಕೋಟೆ ಸೇರಿದಂತೆ ದಿನನಿತ್ಯ ಕೇರಳಕ್ಕೆ ಸಂಚರಿಸುವುದರಿಂದ ವಾಹನ ಸವಾರರು ಗ್ರಾಮಾಂತರ ಪ್ರದೇಶದ ಚಿಕ್ಕ ರಸ್ತೆಗಳಲ್ಲಿ ಹಲವು ಊರುಗಳನ್ನು ಸುತ್ತಿಕೊಂಡು ಮತ್ತೆ ಮುಖ್ಯ ರಸ್ತೆಯನ್ನು ಸೇರಬೇಕಿದೆ.


ಸೇತುವೆ ಕಾಮಗಾರಿ ನಡೆಯುವ ರಸ್ತೆ ಪಕ್ಕದಲ್ಲೆ ಬದಲಿ ರಸ್ತೆಯನ್ನು ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡದಿರುವುದರಿಂದ ಹೊರೆಯಾಲ- ಯಡವನಹಳ್ಳಿ ಮಾರ್ಗವಾಗಿ ಸುಮಾರು ೮ ಕಿ.ಮೀ. ದೂರ ಕಿರಿದಾದ ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎದುರಿನಿಂದ ವಾಹನಗಳು ಬಂದರೆ ಸಂಚರಿಸುವುದು ಕಷ್ಟ , ಸೇತುವೆ ಪಕ್ಕದಲ್ಲೆ ಮಣ್ಣು ಸುರಿದು ಸೇತುವೆ ಪಕ್ಕದಲ್ಲೆ ತಾತ್ಕಾಲಿಕ ರಸ್ತೆ ನಿರ್ಮಿಸಬೇಕು.
-ಕೆಂಪಣ್ಣ ,ರೈತ ಮುಖಂಡರು.


ಮಳೆ ಹೆಚ್ಚಾದ ಕಾರಣ ಸೇತುವೆ ನಿರ್ಮಾಣ ವಿಳಂಬವಾಗುತ್ತಿದೆ. ಕೆಲವೆ ದಿನಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೂಳಿಸಲಾಗುವುದು, ಅಲ್ಲಿಯವರೆಗೆ ಗ್ರಾಮಸ್ಥರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ರಸ್ತೆಗೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ನಂತರವೇ ವಾಹನಗಳು ಸಂಚರಿಸಲು ತಿಳಿಸಲಾಗಿದೆ.
ರಾಮಚಂದ್ರ, ಎಇಇ, ಪಿಡಬ್ಲ್ಯೂಡಿ, ಗುಂಡ್ಲುಪೇಟೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!