ಮೈಸೂರು: ಎಚ್.ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಅವರ ಸಹೋದರಿ ರಂಜಿತಾ ಎಸ್. ಚಿಕ್ಕಮಾದು ಅವರು ಜಾ.ದಳ ಸೇರ್ಪಡೆಯಾಗಲಿದ್ದಾರೆ. ಗುರುವಾರ ಬಿಡದಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜಾ.ದಳ ಸೇರುವ ಮೂಲಕ ಹುಣಸೂರು ಕ್ಷೇತ್ರದಲ್ಲಿ ಜಾ.ದಳ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಬಂಗಾರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹುಣಸೂರು ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಚುನಾಯಿತರಾಗಿದ್ದ ಚಿಕ್ಕಮಾದು ಅವರು ನಂತರದ ದಿನಗಳಲ್ಲಿ ಜಾ.ದಳದಲ್ಲಿ ರಾಜಕೀಯ ಭವಿಷ್ಯ ಕಂಡುಕೊಂಡು ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿದ್ದರು ನಂತರ ತಮ್ಮ ಕಾರ್ಯಕ್ಷೇತ್ರವನ್ನು ಹುಣಸೂರು ನಿಂದ ಎಸ್.ಟಿ.ಮೀಸಲು ಕ್ಷೇತ್ರ ಎಚ್.ಡಿ.ಕೋಟೆಗೆ ಬದಲಾಯಿಸಿಕೊಂಡು ಶಾಸಕರಾಗಿ ಆಯ್ಕೆಯಾಗಿದ್ದರು. ಎರಡನೇ ಅವಧಿಯಲ್ಲಿ ಅನಾರೋಗ್ಯ ದಿಂದ ನಿಧನರಾದ ನಂತರ ಅವರ ಪುತ್ರ ಅನಿಲ್ ಚಿಕ್ಕಮಾದು ಕಾಂಗ್ರೆಸ್ ಸೇರಿ ಎಚ್.ಡಿಕೋಟೆ ಕ್ಷೇತ್ರದ ಶಾಸಕರಾಗಿದ್ದಾರೆ.




