Mysore
22
overcast clouds

Social Media

ಶುಕ್ರವಾರ, 12 ಜೂನ್ 2026
Light
Dark

ಸಿದ್ದರಾಮಯ್ಯನವರದ್ದು ಅನ್ನಭಾಗ್ಯ ಅಲ್ಲ ಕನ್ನಭಾಗ್ಯ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಅನ್ನಭಾಗ್ಯ ಅಲ್ಲ ಕನ್ನಭಾಗ್ಯ ಎಂದು ವ್ಯಂಗ್ಯವಾಡಿರುವ ಬಿಜೆಪಿ, ಚುನಾವಣೆ ವೇಳೆ 10 ಕೆಜಿ ಅಕ್ಕಿ ನೀಡುವ ಆಶ್ವಾಸನೆ ನೀದಿದ್ದ ಕಾಂಗ್ರೆಸ್ ಇದೀಗ ನಾಡಿನ ಜನತೆಗೆ ನಂಬಿಕೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನಾವು ಇಂದಿನಿಂದ ‘ಅನ್ನಭಾಗ್ಯ’ ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ರೂ. 170 ನೀಡಲಿದ್ದೇವೆ ಎಂಬ ಸಿದ್ದರಾಮಯ್ಯ ಅವರ ಟ್ವೀಟ್ ಗೆ ವಿರುದ್ಧವಾಗಿ ಸರಣಿ ಪ್ರತಿ ಟ್ವೀಟ್ ಮಾಡಿರುವ ಬಿಜೆಪಿ, ಕೈ ಪೈಳಯ ನಿಜಕ್ಕೂ ನುಡಿದಂತೆ ನಡೆದಿದ್ದರೇ, 10 ಕೆಜಿ ಅಕ್ಕಿಯ ಮಾರುಕಟ್ಟೆ ದರವನ್ನೇ ಜನತೆಗೆ ನೀಡಬೇಕಾಗಿತ್ತು ಎಂದು ಪ್ರತಿಪಾದಿಸಿದೆ. ಇಷ್ಟು ಮಾತ್ರವಲ್ಲದೆ ನುಡಿದ್ದದೇ ಒಂದು ನಡೆದದ್ದು ಮತ್ತೊಂದು, ಅಕ್ಕಿಮುಕ್ತ ಕರ್ನಾಟಕ ಎಂಬಿತ್ಯಾದಿ ಒಕ್ಕಣೆಗಳೊಂದಿಗೆ ಕಾಲೆಳೆದಿದ್ದಾರೆ.

‘ಹಸಿವು ಮುಕ್ತ ಭಾರತ’ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಪ್ರತಿಯೊಬ್ಬ ಭಾರತೀಯರು ಹಸಿವಿನಿಂದ ಪರಿತಪಿಸಬಾರದು ಎಂಬ ಕಾರಣಕ್ಕೆ ‘ಗರೀಬ್ ಕಲ್ಯಾಣ್ ‘ ಯೋಜನೆಯಡಿ ಪ್ರತಿ ತಿಂಗಳು, ಪಡಿತರದಾರರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಆದರೆ, ಆ 5 ಕೆಜಿ ಅಕ್ಕಿಗೆ ತಮ್ಮ ಲೇಬಲ್ ಅನ್ನು ಸಿದ್ದರಾಮಯ್ಯ ಅವರ ಸರ್ಕಾರ ಈ ಹಿಂದೆ ಅಂಟಿಸಿ, ಮೂಲ ಕೊಡುಗೆದಾರರ ಹೆಸರನ್ನು ಮರೆಮಾಚಿತ್ತು ಎಂದು ಆರೋಪಿಸಿದೆ.

ಈ ಬಾರಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿಯ ಆಶ್ವಾಸನೆ ನೀಡಿದ್ದ, ಕಾಂಗ್ರೆಸ್ ಈಗ ನಾಡಿನ ಜನತೆಗೆ ನಂಬಿಕೆ ದ್ರೋಹ ಎಸಗಿ, 5 ಕೆಜಿ ಅಕ್ಕಿಯ ಕನಿಷ್ಠ ದರವನ್ನು ನೀಡುತ್ತಿರುವುದನ್ನೇ ಮಹಾನ್ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಕಾಂಗ್ರೆಸ್ ನಿಜಕ್ಕೂ ನುಡಿದಂತೆ ನಡೆದಿದ್ದರೇ, 10 ಕೆಜಿ ಅಕ್ಕಿಯ ಮಾರುಕಟ್ಟೆ ದರವನ್ನು ಜನತೆಗೆ ನೀಡಬೇಕಾಗಿತ್ತು.

ಆದರೆ, ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ತನ್ನದು ಎಂದು ಹೇಳಿಕೊಂಡು, ಉಳಿದ 5 ಕೆಜಿ ಅಕ್ಕಿಯ ಕನಿಷ್ಠ ದರವನ್ನು ಜನತೆಗೆ ನೀಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇದ್ದರೆ, ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ಹೊರತುಪಡಿಸಿ, ಉಳಿದ 10 ಕೆಜಿ ಅಕ್ಕಿಯ ಮಾರುಕಟ್ಟೆ ದರವನ್ನು ಫಲಾನುಭವಿಗಳಿಗೆ ವರ್ಗಾಯಿಸಬೇಕು. ಆದರೆ, ಇದೆಲ್ಲವನ್ನೂ ಬಿಟ್ಟು ಕೇವಲ ತೋರಿಕೆಗೆ, ಫಲಾನುಭವಿಗಳಿಗೆ ಹಣ ವರ್ಗಾಯಿಸುತ್ತೇವೆಂಬುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹೇಳಿದ್ದು….

ಹಸಿವಿನ ಬೇನೆ ನಾಡಿನ ಬಡಜನರನ್ನು ಬಾಧಿಸದಿರಲಿ ಎಂಬ ಸದುದ್ದೇಶದೊಂದಿಗೆ ನಾವು ಇಂದಿನಿಂದ ‘ಅನ್ನಭಾಗ್ಯ’ ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ರೂ. 170 ನೀಡಲಿದ್ದೇವೆ. ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ನೀಡುವ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಕೆ ಮಾಡಬೇಕೆಂದು ನಾಡ ಬಾಂಧವರಲ್ಲಿ ಮನವಿ ಮಾಡುತ್ತೇನೆ. ಹಸಿವಿನ ಸಂಕಟ ಅನುಭವಿಸಿದವರಿಗೆ ಮಾತ್ರ ಅರಿವಿರಲು ಸಾಧ್ಯ. ಹಸಿವುಮುಕ್ತ ಕರ್ನಾಟಕ ನಿರ್ಮಾಣದ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ವಿನಂತಿ ಮಾಡಿದ್ದರು. ಅವರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!