ಹೈದರಾಬಾದ್: ತೆಲಂಗಾಣದ ಭಾರತ ರಾಷ್ಟ್ರ ಸಮಿತಿ ಸರ್ಕಾರ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ತೆಲಂಗಾಣಕ್ಕೆ ಉಪಯೋಗವಾಗುವ ಹಲವು ಯೋಜನೆಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಸಹಕರಿಸುತ್ತಿಲ್ಲ. ತೆಲಂಗಾಣದ ಸರ್ಕಾರ ಪರಿವಾರವಾದ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪ್ರಧಾನಿ ಆರೋಪಿಸಿದರು.
‘ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಸಿಗದಿರುವುದರಿಂದ ನಾನು ನೊಂದಿದ್ದೇನೆ. ಇದು ತೆಲಂಗಾಣದ ಜನರ ಕನಸಿಗೆ ಅಡ್ಡಿಯುಂಟು ಮಾಡುತ್ತಿದೆ. ತೆಲಂಗಾಣದ ಜನರಿಗೆ ತಲುಪಿಸಲು ಯೋಜನೆ ಮಾಡಿರುವಂಥ ಯೋಜನೆಗಳಿಗೆ ತಡೆಯುಂಟು ಮಾಡಬೇಡಿ ಎಂದು ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ‘ ಎಂದು ಮೋದಿ ಹೇಳಿದ್ದಾರೆ.
ಮುಖ್ಯಮಂತ್ರಿ ಕೆ.ಸಿ.ಆರ್ ಅವರ ಹೆಸರೆತ್ತದೆ ವಾಗ್ದಾಳಿ ನಡೆಸಿದ ಅವರು, ಕೆಲವರು ಪರಿವಾರವಾದವನ್ನು ಪೋಷಿಸುತ್ತಿದ್ದು, ತೆಲಂಗಾಣದ ಜನರಿಗೆ ಸಿಗಬೇಕಾದ ಪ್ರಯೋಜನವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.





