Mysore
21
overcast clouds
Light
Dark

ಎಚ್‌ಡಿಕೆಗೆ ಅನಾರೋಗ್ಯ : ಆಸ್ಪತ್ರೆಗೆ ದಾಖಲು

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ. 28ರ ರಾತ್ರಿಯಿಂದಲೇ ಅವರು ಕೊಂಚ ಸುಸ್ತಾಗಿದ್ದು, ನಿಧಾನವಾಗಿ ಚಳಿ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಮಾರಸ್ವಾಮಿಯವರು ಇತ್ತೀಚೆಗೆ ತೀವ್ರವಾಗಿ ಬಳಲಿದ್ದರು. ಚುನಾವಣೆಯಿಂದ ಇಲ್ಲಿಯವರೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕರ್ನಾಟಕನ್ನು ಸುತ್ತಾಡಿ ಬಂದಿದ್ದರು. ಚುನಾವಣೆ ಮುಗಿದ ನಂತರ ಎರಡು ಬಾರಿ ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ವಿದೇಶದಿಂದ ಬಂದಾದ ನಂತರ ಕಾರ್ಯಕರ್ತರ ಭೇಟಿ, ಪಕ್ಷ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಅವರಿಗೆ ಸೂಕ್ತವಾದ ವಿಶ್ರಾಂತಿ ಸಿಗದೇ ಇದ್ದಿದ್ದುದೇ ಅನಾರೋಗ್ಯಕ್ಕೆ ಕಾರಣ ಎನ್ನಲಾಗಿದೆ.

ಕೋಲಾರ ಕಾರ್ಯಕ್ರಮ ರದ್ದು : ಆರೋಗ್ಯ ಸರಿಯಿದ್ದಿದ್ದರೆ ಕುಮಾರಸ್ವಾಮಿಯವರು ಇಂದು ಕೋಲಾರಕ್ಕೆ ಭೇಟಿ ನೀಡಬೇಕಿತ್ತು. ಶ್ರೀನಿವಾಸಪುರಕ್ಕೆ ಭೇಟಿ ನೀಡಿ ಅಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಇತ್ತು. ಅರಣ್ಯ ಇಲಾಖೆಯ ಒತ್ತುವರಿಯಿಂದಾಗಿ ಬೆಳೆಗಳು ನಷ್ಟವಾಗಿದ್ದ ಹಿನ್ನೆಲೆಯಲ್ಲಿ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯಕ್ರಮವಿತ್ತು.
ಅರಣ್ಯ ಇಲಾಖೆಯು ಇತ್ತೀಚೆಗೆ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ತೆರವುಗೊಳಿಸಿದ್ದರು. ಆ ಸಂದರ್ಭದಲ್ಲಿ ಬೆಳೆ ನಾಶ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ರೈತರ ಜೊತೆಗೆ ಮಾತುಕತೆ ನಡೆಸಲು ಕುಮಾರಸ್ವಾಮಿಯವರು ಶ್ರೀನಿವಾಸಪುರಕ್ಕೆ ಹೋಗುವ ಕಾರ್ಯಕ್ರಮವಿತ್ತು. ಈಗ ಆ ಕಾರ್ಯಕ್ರಮ ರದ್ದಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ