ನವದೆಹಲಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಶುಕ್ರವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖ ಅವರು ಬಿಜೆಪಿ ಸೇರಿದರು.
ಅವಿಭಜಿತ ಆಂಧ್ರ ಪ್ರದೇಶದ ಕೊನೇ ಮುಖ್ಯಮಂತ್ರಿಯಾಗಿದ್ದ ಅವರು, ಮಾರ್ಚ್ 12ರಂದು ಕಾಂಗ್ರೆಸ್ ತೊರೆದಿದ್ದರು.
ಆಂಧ್ರ ಪ್ರದೇಶದ ವಿಭಜನೆಯನ್ನು ವಿರೋಧಿಸಿದ್ದ ಕಿರಣ್ ಕುಮಾರ್ 2014ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ನಿಂದ ಹೊರಬಂದಿದ್ದರು. ಕಾಂಗ್ರೆಸ್ ತೊರೆದ ಬಳಿಕ, ‘ಕಿರಣ್ ಜೈ ಸಮೈಕ್ಯಾ ಆಂಧ್ರ’ ಪಕ್ಷವನ್ನು ಕಟ್ಟಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಈ ಪಕ್ಷ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ನಂತರ 2018ರಲ್ಲಿ ಅವರು ಮತ್ತೆ ಕಾಂಗ್ರೆಸ್ ಸೇರಿದ್ದರು. ಈಗ ಬಿಜೆಪಿಗೆ ಸೇರಿದ್ದಾರೆ.





