ನವದೆಹಲಿ : ಕಳೆದ ಐದು ವರ್ಷಗಳಲ್ಲಿ ಕೇವಲ 12.2 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದ್ದು, ಊಹಿಸಲಾಗದ ರೀತಿಯಲ್ಲಿ ನಿರುದ್ಯೋಗವಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ಹೇಳಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯು ಹುಟ್ಟುಹಾಕಿದ ಸಂಘಟಿತ ದ್ವೇಷದ ಪರಿಸ್ಥಿತಿಯ ಈ ದುರಂತಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ, ಮೋದಿ ಸರ್ಕಾರದ ಅಡಿಯಲ್ಲಿ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಕೇವಲ 12.2 ಲಕ್ಷ ಔಪಚಾರಿಕ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಅಂದರೆ ವರ್ಷಕ್ಕೆ ಸರಾಸರಿ 2,44,000 ಉದ್ಯೋಗಗಳು. ನಾವು ಈ ಅಂಕಿಅಂಶವನ್ನು ಪತ್ತೆ ಹಚ್ಚಿಲ್ಲ.
ಮೋದಿ ಸರ್ಕಾರವೇ ಇಪಿಎಫ್ ನಿಯಮಿತ ಕೊಡುಗೆದಾರರು ಔಪಚಾರಿಕ ಉದ್ಯೋಗಗಳ ಸೃಷ್ಟಿ ಎಂದು ರಚಿಸಿದ್ದು, ಇಪಿಎಫ್ ಡೇಟಾ ಇದನ್ನು ದೃಢೀಕರಿಸುತ್ತದೆ. ಬಿಜೆಪಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಅಂದರೆ 9 ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬಹುದಿತ್ತು ಎಂದಿದ್ದಾರೆ.
ನಮ್ಮ ಯುವಕರು ಕರಾಳ ಭವಿಷ್ಯವನ್ನು ನೋಡುತ್ತಿದ್ದಾರೆ. ಆಶ್ಚರ್ಯವೇನಿಲ್ಲ, ಬೀದಿಗಳಲ್ಲಿ ಕೋಪ ಮತ್ತು ಹಿಂಸೆ ಇದೆ. ಉದ್ಯೋಗ ಕೊಡಿಸುವಲ್ಲಿ ಬಿಜೆಪಿ ದಯನೀಯವಾಗಿ ವಿಫಲವಾಗಿದೆ.’ ಊಹಿಸಲಾಗದ ನಿರುದ್ಯೋಗ, ಬೆಲೆ ಏರಿಕೆ ಮತ್ತು ಬಿಜೆಪಿಯವರು ಹುಟ್ಟುಹಾಕಿದ ದ್ವೇಷದ ಪರಿಸ್ಥಿತಿ ಈ ದುರಂತಕ್ಕೆ ಕಾರಣವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ನಮ್ಮ ಬಡ ಮತ್ತು ಮಧ್ಯಮ ವರ್ಗದ ಉಳಿವಿಗಾಗಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.





