ಬಿ.ಎಸ್.ವಿನಯ್
ಇಲ್ಲಿಯವರೆಗೆ ನಮ್ಮಂತಹ ಅಂಕಲ್ -ಆಂಟಿಗಳು ಜೆನ್ ಝೀಗಳ ಬಗ್ಗೆ ಒಳ್ಳೆಯ ಮಾತಾಡಿದ್ದಕ್ಕಿಂತ ಮೂಗು ಮುರಿದದ್ದೇ ಹೆಚ್ಚು. ಈ ಹುಡುಗರಿಗೆ ಜವಾಬ್ದಾರಿ ಇಲ್ಲ, ದೇಶದ ಬಗ್ಗೆ, ಸಮಾಜದ ಬಗ್ಗೆ ಕಾಳಜಿ ಇಲ್ಲ, ತಮ್ಮದೇ ಆದ ಗುಂಪಿನಲ್ಲಿರುತ್ತವೆ; ಗುಂಗಿನಲ್ಲಿರುತ್ತವೆ. ಸ್ನೇಹಿತರು, ಕಾಲೇಜು, ಸಿನಿಮಾ, ಆಟ, ಮೋಜು ಮಸ್ತಿ, ಅಲೆ ದಾಟ ಹೀಗೆ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ; ವಾಸ್ತವಿಕ ಪ್ರಪಂಚದೊಡನೆ ಸಂಬಂಧವನ್ನು ಹೊಂದಿಲ್ಲ ಮುಂತಾದ ಹಲವು ಆರೋಪಗಳ ಸರಮಾಲೆಯೇ ಇವರನ್ನು ಸುತ್ತಿಕೊಂಡಿತ್ತು.
ಒಂದು ಹಂತದವರೆಗೆ ಈ ಆರೋಪಗಳಲ್ಲಿ ಹುರುಳಿಲ್ಲದೆ ಇರಲಿಲ್ಲ. ಈ ಶತಮಾನದ ಯಾವ ಚಳವಳಿಗಳಲ್ಲೂ ಇಂದಿನ ತರುಣ ಪೀಳಿಗೆ ಕಾಣಿಸಿಕೊಂಡಿರಲಿಲ್ಲ. ಅಥವಾ ಈ ಶತಮಾನದಲ್ಲಿ ತರುಣ ಪೀಳಿಗೆ ಪಾಲ್ಗೊಳ್ಳುವಂಥ ಯಾವ ಚಳವಳಿಯೂ ನಡೆದೇ ಇರಲಿಲ್ಲ ಎಂದೂ ಹೇಳಬಹುದೇನೋ. ಅದಕ್ಕೆ ಕಾರಣಗಳು ಏನಿರಬಹುದು ಎಂದು ಯೋಚಿಸಿದರೆ. ಹೊಸ ಶತಮಾನ ಹುಟ್ಟುವ ವೇಳೆಗೆ ಕನ್ನಡದ ನೆಲದಲ್ಲಿ ಆವರೆಗಿನ ಪ್ರಮುಖ ಚಳವಳಿಗಳಾಗಿದ್ದ ರೈತ ಚಳವಳಿ, ದಲಿತ ಚಳವಳಿ, ಕನ್ನಡ ಚಳವಳಿಗಳು ತನ್ನ ಮೊನಚು ಕಳೆದುಕೊಂಡಿದ್ದವು. ಮುಖಂಡರುಗಳ ಸ್ವಾರ್ಥ ರಾಜಕಾರಣದ ಲಾಲಸೆ ಮುಂತಾದ ಕಾರಣಗಳಿಂದಾಗಿ ಹಲವು ಬಣಗಳಾಗಿ ಒಡೆದು ಛಿದ್ರವಾಗಿದ್ದವು. ಚಳವಳಿಯಲ್ಲೇ ಬೆಳೆದು ಬಂದವರಿಗೆ; ಚಳವಳಿಯ ಒಳಗೆ ಇದ್ದವರಿಗೇ ಪರಸ್ಪರ ನಂಬಿಕೆ ಇಲ್ಲವಾದಾಗ, ಹೊಸ ಪೀಳಿಗೆಗೆ ಆ ಚಳವಳಿಗಳ ಬಗ್ಗೆ ಯಾವ ರೀತಿ ನಂಬಿಕೆ ಹುಟ್ಟಲು ಸಾಧ್ಯ? ಚಳವಳಿಗಾರರೆಂದರೆ ಒಂದೋ ವಸೂಲಿ ವೀರರು ಅಥವಾ ವಿತಂಡವಾದಿಗಳು ಅಥವಾ ಹುಚ್ಚು ಹಠಮಾರಿಗಳು ಎಂಬ ಭಾವನೆ ಸಾರ್ವ ಜನಿಕರಲ್ಲಿ ಮೂಡಿಬಿಟ್ಟಿತ್ತು. ಹಾಗಾಗಿ ಚಳವಳಿಗಳೆಂದರೆ ಜುಗುಪ್ಸೆ ಅಥವಾ ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಭಾವ ವ್ಯಾಪಕವಾ ಗಿತ್ತು. ಸಮಕಾಲಿನ ಸಮಾಜದಲ್ಲೇ ಇಂತಹ ಅಪ ನಂಬಿಕೆಗಳು ಹಬ್ಬಿಹರಡಿದ್ದಾಗ ಆ ಮುಂದಿನ ಪೀಳಿಗೆಗೆ ಇದರ ಬಗ್ಗೆ ಗೌರವ ಹೇಗೆ ಹುಟ್ಟಲು ಸಾಧ್ಯವಿತ್ತು?
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇದ್ದ ಸತ್ಯಾಗ್ರಹ, ಅಸಹಕಾರ, ಉಪವಾಸ, ಮುಷ್ಕರ, ಮೊನಚಾದ ತಾತ್ವಿಕ ನೆಲಗಟ್ಟಿನ ಭಾಷಣ ಮುಂತಾದ ಮಾದರಿಗಳನ್ನು ಬಿಟ್ಟು, ಚಳವಳಿಗಳೆಂದರೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವುದು, ನಾಲ್ಕು ರಸ್ತೆ ಕೊಡುವ ಜಾಗದಲ್ಲಿ ಟೈಯರ್ಗಳನ್ನಿಟ್ಟು ಬೆಂಕಿ ಹಚ್ಚುವುದು, ಸರ್ಕಾರಿ ಬಸ್ಸಿಗೆ ಕಲ್ಲು ತೂರುವುದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವುದು ಮುಂತಾದ ಕಿಡಿಗೇಡಿ ಕೃತ್ಯಗಳನ್ನೇ ಚಳುವಳಿಗಳು ಎಂದು ಭಾವಿಸಿದಾಗ ಅದರ ಕುರಿತು ಹೊಸ ಜನಾಂಗಕ್ಕೆ ಸದಭಿಪ್ರಾಯ ಮೂಡುವುದಾದರೂ ಹೇಗೆ?
ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಚುನಾವಣೆಗಳಲ್ಲಿ ರಾಜಕೀಯ, ಜಾತಿ, ಹಿಂಸೆ, ಹೊಡೆದಾಟ, ಗುಂಪುಗಾರಿಕೆ ಮುಂತಾದ ಕೆಡುಕಿನ ಬೆಳವಣಿಗೆಗಳು ನಡೆದು, ಮುಂದೆ ವಿದ್ಯಾರ್ಥಿ ಸಂಘಗಳ ಚುನಾವಣೆ ಗಳೇ ರದ್ದಾದವು. ವಿದ್ಯಾರ್ಥಿ ಸಂಘಟನೆಗಳು ವಿವಿಧ ರಾಜಕೀಯ ಪಕ್ಷಗಳ ಬಾಲಬಡುಕರ ಗುಂಪಾದವು. ರಾಜಕೀಯ ಮುಖಂಡರಿಗೆ ವಿದ್ಯಾರ್ಥಿ ಸಂಘಗಳು ವೋಟ್ ಬ್ಯಾಂಕುಗಳಾದವು. ಚುನಾವಣಾ ರಾಜಕಾರಣದ ಎಲ್ಲ ಅನಿಷ್ಟಗಳೂ, ವಿದ್ಯಾರ್ಥಿ ಚಳುವಳಿಗೂ ಅಂಟಿ ಕೊಂಡವು. ಇದನ್ನೆಲ್ಲ ಕಂಡು ಹೇವರಿಸಿದ ಪೋಷಕರು ತಮ್ಮ ಮಕ್ಕಳನ್ನು ಈ ಚಟುವಟಿಕೆಗಳಿಂದ ದೂರವೇ ಉಳಿಸಲು ಬಯಸಿದರು. ಅದಕ್ಕೆ ಸರಿಯಾಗಿ ಆರಂಭ ಗೊಂಡ ಸೆಮಿಸ್ಟರ್ ಪದ್ಧತಿ, ವಿದ್ಯಾರ್ಥಿಗಳನ್ನು ಸದಾ ಕಾಲವೂ ಯುದ್ಧಸನ್ನದ್ಧರಾದ ಯೋಧರಂತಾಗಿಸಿತು. ಅವರು ಆಟೋಟ, ಹಾಡು ನಾಟಕಗಳನ್ನೆಲ್ಲಾ ಮರೆತರು.
ವರ್ಷವಿಡೀ ಅಸೈನ್ಮೆಂಟು, ಪರೀಕ್ಷೆ, ಟೆಸ್ಟ್ಗಳು, ಸಿಇಟಿ, ಮೆಡಿಕಲ್ಲು, ಎಂಜಿನಿಯರಿಂಗು ಎಂದು ಕೇವಲ ಅಂಕ ಗಳಿಕೆಯಲ್ಲಿ ಮಗ್ನರಾದರು. ವಿದ್ಯಾರ್ಥಿ ಚಳವಳಿಗಳು ಸದ್ದಿಲ್ಲದೆ ಸತ್ತುಹೋದವು. ಇವೇ ಮುಂತಾದ ಹಲವು ಕಾರಣಗಳಿಂದಾಗಿ ಜೆನ್ ಝೀಗಳಿಗೆ ಚಳವಳಿಗಳ ಮೇಲೆ ಭ್ರಮನಿರಸನ ಉಂಟಾಗಿದ್ದರೆ ಯಾವ ಆಶ್ಚರ್ಯವೂ ಇಲ್ಲ. ಆದರೆ ಕಾಲ ನಿಂತ ನೀರಲ್ಲ. ಕುಕ್ಕರಿನ ಸೀಟಿ ಕೂಗಲು ಒಳಗಿನ ಒತ್ತಡವೇ ಕಾರಣವಾಗುತ್ತದೆ. ಎಂಥಾ ಮಾಗಿ ಕಾಲದ ಸುದೀರ್ಘ ಇರುಳಾದರೂ ಒಮ್ಮೆ ಮುಗಿಯಲೇ ಬೇಕು; ಹೊಸ ಬೆಳಕು ಮೂಡಲೇಬೇಕು, ಮೂಡುತ್ತಿದೆ. ಸದ್ಯಕ್ಕೆ ಇಷ್ಟೇ
” ಎಂಥಾ ಮಾಗಿ ಕಾಲದ ಸುದೀರ್ಘ ಇರುಳಾದರೂ ಒಮ್ಮೆ ಮುಗಿಯಲೇಬೇಕು; ಹೊಸಬೆಳಕು ಮೂಡಲೇಬೇಕು ಮತ್ತು ಮೂಡುತ್ತಿದೆ.”




