‘ಆಂದೋಲನ’ ಪತ್ರಿಕೆಯ ಹೊಸ ಡಿಜಿಟಲ್ ಮೈಲಿಗಲ್ಲಿಗೆ ಹರಿದು ಬಂದ ಹಾರೈಕೆಗಳು
” ಒಂದು ಲಕ್ಷ ಹಿಂಬಾಲಕರು ತಲುಪಿರುವುದು ಕೂಡ ಹೊಸ ರೀತಿಯ ‘ಆಂದೋಲನ’ ನಾನು ಬಾಲ್ಯದಿಂದಲೂ ‘ಆಂದೋಲನ’ ದಿನ ಪತ್ರಿಕೆಯನ್ನು ನೋಡ್ತಾ, ಓದ್ತಾ ಬೆಳೆದವ್ಳು. ಆಂದೋಲನ ಅಂದ್ರೆನೇ ಕ್ರಾಂತಿ. ನಮ್ಮ ಊರು ಪಾಂಡವಪುರದ ಹತ್ರಾನೂ ಆಂದೋಲನ ಪತ್ರಿಕೆಯ ಕ್ರಾಂತಿ ಶುರುವಾಯ್ತು. ಬಹಳ ಚೆನ್ನಾಗಿ ಸುದ್ದಿ ಮಾಡ್ತಿದ್ರು, ನಂಬಿಕೆಗೆ ಅರ್ಹವಾದ ಪತ್ರಿಕೆಯಾಗಿತ್ತು. ಕಾಲಕ್ರಮೇಣ ತುಂಬಾ ಪತ್ರಿಕೆಗಳು ಬಂದು ಸ್ಪರ್ಧೆ ಎದುರಾದರೂ ಆಂದೋಲನ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಂಡಿತು. ಯಾವುದೇ ಆಗಿರಲಿ ಕಾಲಕಾಲಕ್ಕೆ ಅಪ್ಡೇಟ್ ಆಗ್ಬೇಕು. ಆ ಅಪ್ಡೇಟ್ ಆಂದೋಲನ ವೆಬ್ ಅಂದ್ರೆ ಇನ್ ಸ್ಟಾ ಆಗಿದೆ. ಒಂದು ಲಕ್ಷ ಫಾಲೋವರ್ಸ್ ತಲುಪಿರುವುದು ಕೂಡ ಆಂದೋಲನವೇ. ಒಂದು ಪತ್ರಿಕೆ ಅಪ್ಡೇಟ್ ಆಗಿ ಸೋಶಿಯಲ್ ಮೀಡಿಯಾದಲ್ಲೂ ಲಕ್ಷ ಜನರ ವಿಶ್ವಾಸ ಗಳಿಸಿಕೊಳ್ಳುವುದು ಈಗಿನ ಕಾಲಕ್ಕೆ ದೊಡ್ಡ ಸಾಧನೆ. ಹೀಗೆ ಲಕ್ಷ ದಾಟಿ ಮಿಲಿಯನ್ ಫಾಲೋವರ್ಸ್ ಆಗಲಿ. ಸುದ್ದಿಯನ್ನು ಹೀಗೆಯೇ ಕೊಡುತ್ತಿರಲಿ ಎಂದು ಆಶಿಸುತ್ತೇನೆ.”
-ಅಕ್ಷತಾ ಪಾಂಡವಪುರ, ನಟಿ, ರಂಗಭೂಮಿ ಕಲಾವಿದೆ
” ಡಿಜಿಟಲ್ಗೆ ಅಪ್ಡೇಟ್ ಆಗುವ ಮೂಲಕ ಆಂದೋಲನ ಜನರಿಗೆ ಹತ್ತಿರವಾಗಿದೆ ‘ಆಂದೋಲನ’ ಪತ್ರಿಕೆ ರಾಜಶೇಖರ್ ಕೋಟಿಯವ್ರ ಸತತ ಪ್ರಯತ್ನ ಮತ್ತು ಕಾಳಜಿಯಿಂದ ನಮ್ಮ ರಾಜ್ಯದ ಜಿಲ್ಲಾಮಟ್ಟದ ಪತ್ರಿಕೆಗಳಲ್ಲಿ ಮುಖ ಸ್ಥಾನದಲ್ಲಿದೆ. ಜನಪರ ಕಾಳಜಿಯಿಂದ ಕೋಟಿಯವ್ರು ಅತ್ಯುತ್ತಮ ಪತ್ರಿಕೆಯನ್ನು ಮಾಡಿದ್ದಾರೆ. ಡಿಜಿಟಲ್ಗೆ ಅಪ್ಡೇಟ್ ಆಗುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದೆ. ಆರೋಗ್ಯಕರ ಸಮಾಜದ ಹಿನ್ನೆಲೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ‘ಆಂದೋಲನ’ ಮಾದರಿ ಪತ್ರಿಕೆ. ನೂರು ಸಾವಿರ ಹಿಂಬಾಲಕರನ್ನು ಆಂದೋಲನ ಇನ್ ಸ್ಟಾ ಪೇಜ್ ಪಡೆದಿರುವುದು ನಿಜಕ್ಕೂ ಸಂತಸದ ವಿಚಾರ.”
-ಡಾ.ಕಾಳೇಗೌಡ ನಾಗವಾರ ಖ್ಯಾತ ಸಾಹಿತಿ
” ಡಿಜಿಟಲ್ ಆಂದೋಲನ ಇನ್ನಷ್ಟು ಮೌಲ್ಯಗಳೊಂದಿಗೆ ಮುಂದುವರಿಯಲಿ ಮೈಸೂರು ಪ್ರಾಂತ್ಯದ ಬಲಿಷ್ಠ ಪತ್ರಿಕೆ ಆಂದೋಲನ’ ಇದೀಗ ಡಿಜಿಟಲ್ ವೇದಿಕೆಯಲ್ಲೂ ದೊಡ್ಡ ದನಿಯಾಗಿ ಹೊರಹೊಮ್ಮಿರುವುದು ಸಂಭ್ರಮದ ಸಂಗತಿ. ಯಾವುದೇ ಡಿಜಿಟಲ್ ವೇದಿಕೆ ಒಂದು ಲಕ್ಷ ಫಾಲೋವರ್ಸ್ ಪಡೆಯುವುದು ಸಣ್ಣ ಮಾತಲ್ಲ. ಸಾಧನೆ ಮಾಡಿ ರುವ ‘ಡಿಜಿಟಲ್ ಆಂದೋಲನ’, ತನ್ನ ಸೂಕ್ಷ್ಮತೆ, ಅಭಿರುಚಿ, ಬಹುತ್ವದ ಮೌಲ್ಯಗಳೊಂದಿಗೆ ಇನ್ನಷ್ಟು, ಮತ್ತಷ್ಟು ಮುಂದುವರಿಯಲಿ; ಜನರ ನಿಜದನಿಯಾಗಿ ಜನಪ್ರಿಯವಾಗಲಿ ಎಂಬ ಹಾರೈಕೆ ನಮ್ಮೆಲ್ಲರದು.”
– ಎನ್.ಎಸ್.ಶಂಕರ್ ಹಿರಿಯ ಪತ್ರಕರ್ತ ಹಾಗೂ ಖ್ಯಾತ ನಿರ್ದೇಶಕ
” ನಮ್ಮ ಮೈಸೂರು ಮೂಲದ ಪತ್ರಿಕೆಗೆ ಅನಂತ ಶುಭಾಶಯಗಳು ಆಂದೋಲನ‘ ದಿನಪತ್ರಿಕೆಯ ಡಿಜಿಟಲ್ ಆವೃತ್ತಿಯು ದಿನ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಾ ಒಂದು ಲಕ್ಷಕ್ಕೂ ಮಿಗಿಲಾದ ಫಾಲೋವರ್ಸ್ ಸಂಪಾದಿಸಿರುವುದು ಅತ್ಯಂತ ಶ್ಲಾಘನೀಯ. ನಿರ್ಭಿಡೆ, ನಿರ್ದಾಕ್ಷಿಣ್ಯ , ನಿಸ್ಪೃಹತೆ , ನಿರ್ಭೀತಿಯಿಂದ ಸುದ್ದಿ ಸಮಾಚಾರಗಳನ್ನು ಬಿತ್ತರಿಸುವ ಪತ್ರಿಕೆ ಎಂದು ಹೆಸರು ಮಾಡಿರುವ ಆಂದೋಲನ ತನ್ನ ಮನರಂಜನಾ ಲೇಖನಗಳಿಗೂ ಹೆಸರುವಾಸಿಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಮೈಸೂರು ಮೂಲದ ಪತ್ರಿಕೆಗೆ ಅನಂತ ಶುಭಾಶಯ ಗಳು. ಹೀಗೆಯೇ ಮುಂದುವರಿಯುತ್ತಾ ಪತ್ರಿಕೆಯು ಯಶಸ್ಸಿನ ಉತ್ತುಂಗಕ್ಕೇರಿ ಕನ್ನಡಿಗರ ಜನಮನದ ದನಿಯಾಗಲಿ.”
-ಶುಭ ಸಂಜಯ ಅರಸ್ , ಸಂಸ್ಥಾಪಕಿ ಮೈಸೂರು ಲಿಟರೇಚರ್ ಫೆಸ್ಟಿವಲ್
ಡಿಜಿಟಲ್ ಆಂದೋಲನ ಬಡವರ ದ್ವನಿಯಾಗಿ, ಉಳ್ಳವರ ಮನ ಪರಿವರ್ತನೆಯ ಅಸ್ತ್ರವಾಗಲಿ:
‘ಆಂದೋಲನ’ ದಿನ ಪತ್ರಿಕೆಯು ೯೦ರ ದಶಕದಿಂದಲೂ ಚಾಮರಾಜನಗರ ಪ್ರಾಂತ್ಯದಲ್ಲಿ ಓದುಗರ ಮೆಚ್ಚುಗೆಯನ್ನು ಪಡೆದಿದೆ. ನೊಂದವರ, ಬಡವರ, ದೀನ ದಲಿತರ ದನಿಯಾಗಿ ಜನರ ಪ್ರೀತಿ ಗಳಿಸಿದೆ. ಆಂದೋಲನ ದಿನಪತ್ರಿಕೆ, ಚಾಮರಾಜನಗರ ಜಿಲ್ಲೆಯ ಏಳಿಗೆಗೂ ಅಪಾರ ಕೊಡುಗೆ ನೀಡಿದೆ. ಪ್ರಸ್ತುತ ಈಗಿನ ಸೋಷಿಯಲ್ ಮೀಡಿಯಾದಂತಹ ಆಧುನಿಕ ಯುಗದಲ್ಲಿ ಯುವಕರು ಡಿಜಿಟಲ್ ಮಾದರಿಗೆ ಒಗ್ಗಿಹೋಗಿರುವ ಕಾರಣದಿಂದ ಆಂದೋಲನ ದಿನಪತ್ರಿಕೆ ತನ್ನ ಇರುವಿಕೆಯನ್ನು ಡಿಜಿಟಲ್ ಮಾದರಿಗೆ ಮಾರ್ಪಡಿಸಿ ಯುವಕರಿಗೆ ಹತ್ತಿರವಾಗಿರುವುದು ಹರ್ಷದಾಯಕ ಹಾಗೂ ಹೆಮ್ಮೆಯ ಸಂಗತಿ. ಆಂದೋಲನ ದಿನಪತ್ರಿಕೆಯು ತನ್ನ ಡಿಜಿಟಲ್ ವೇದಿಕೆ ಮುಖಾಂತರ ಜನರ ಬಳಿಗೆ ಸಾಗುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ಲಕ್ಷ ಫಾಲೋವರ್ಸ್ ಮುಟ್ಟಿದೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯು ತನ್ನ ಬಹುತ್ವವನ್ನು ಉಳಿಸಿಕೊಳ್ಳಲಿ ಮತ್ತು ಸಮಾಜಕ್ಕೆ ಉತ್ತಮ ಮೌಲ್ಯವನ್ನು ನೀಡಲಿ. ಬಡವರ ಧ್ವನಿಯಾಗಿ ಉಳ್ಳವರ ಎದೆಗೆ ಒದೆಯುವ ಅಸ್ತ್ರವಾಗಲಿ ಎಂದು ಹಾರೈಸುತ್ತೇನೆ.
-ಎಸ್.ಜಿ.ಮಹಾಲಿಂಗ ಗಿರ್ಗಿ , ವಕೀಲರು, ಚಾಮರಾಜನಗರ
ನೆಲದಲ್ಲಿ ದೃಢವಾಗಿ ಬೇರುಬಿಟ್ಟ ನುಡಿಸಸಿ ನೆಲ, ಬಾನುಗಳನ್ನು ಆವರಿಸುವ ಹಾಗೆ ಉದಾಹರಣೆ ಇದು: ‘ಆಂದೋಲನ’ದ ಡಿಜಿಟಲ್ ರೂಪವು ನೂರು ಸಾವಿರಕ್ಕೂ ಹೆಚ್ಚು ಓದು-ನೋಟಗಳನ್ನು ಪಡೆದಿರುವುದು ಸಂತೋಷ, ಸಂಭ್ರಮದ ಸಂಗತಿ. ಇರುವ ಊರಿನ ನೆಲದಲ್ಲಿ ದೃಢವಾಗಿ ಬೇರುಬಿಟ್ಟ ನುಡಿಸಸಿ ನೆಲ, ಬಾನುಗಳನ್ನು ಆವರಿಸುವ ಹಾಗೆ ಬೆಳೆದೊಂದು ಉದಾಹರಣೆ ಇದು. ಈಗ ಭೌತಿಕವಾಗಿ ನಮ್ಮೊಡನೆ ಇರದ ರಾಜಶೇಖರ ಕೋಟಿ, ರಾಮು ಇಂಥ ಹಿರಿಯರು ರೂಪಿಸಿದ ನುಡಿಕನ್ನಡಿಯಲ್ಲಿ ಮೈಸೂರು ಸೀಮೆಯ ಕನ್ನಡ ಬಲ್ಲ ಅಸಂಖ್ಯ ಮನಸುಗಳು ತಮ್ಮನ್ನೇ ಕಂಡಿವೆ. ರವಿ, ರಶ್ಮಿ ಮತ್ತು ಆಂದೋಲನದ ಬಳಗದ ಎಲ್ಲ ಗೆಳೆಯರಿಗೆ ಅಭಿನಂದನೆ. ಆಂದೋಲನವು ನೋಟ, ನಿಲುಮೆಗಳಲ್ಲಿ ರಾಜಿ ಮಾಡಿಕೊಳ್ಳದೆ ಮತ್ತೂ ವಿಸ್ತಾರಗೊಳ್ಳಲಿ ಎಂದು ಹಾರೈಸುವೆ.”
-ಓ.ಎಲ್.ನಾಗಭೂಷಣ ಸ್ವಾಮಿ, ಖ್ಯಾತ ವಿಮರ್ಶಕ ಮತ್ತು ಅನುವಾದಕ
ಆಂದೋಲನವನ್ನು ಬೆಂಬಲಿಸುತ್ತಿರುವ ನೂರು ಸಾವಿರ ವೀಕ್ಷಕರಿಗೆ ನಮ್ಮ ಅಭಿನಂದನೆಗಳು:
ನಮ್ಮ ಮೈಸೂರಿನ ನೆಚ್ಚಿನ ‘ಆಂದೋಲನ’ ದಿನಪತ್ರಿಕೆಯು ಐದು ದಶಕಗಳಿಗೂ ಮಿಗಿಲಾಗಿ ಪ್ರಿಂಟ್ ಮಾಧ್ಯಮದ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದು , ಇದೀಗ ಡಿಜಿಟಲ್ ಮಾಧ್ಯಮದ ಮೂಲಕ ನೂರು ಸಾವಿರ ವೀಕ್ಷಕರ ಹೃದಯಕ್ಕೆ ಲಗ್ಗೆ ಹಾಕಿರುವುದು ಸಂಭ್ರಮದ ವಿಚಾರ. ಡಿಜಿಟಲ್ ಯುಗದಲ್ಲಿ ಸಕಾಲಿಕವಾದ ಮತ್ತು ಮಹತ್ವದ ಹೆಜ್ಜೆಯನ್ನಿಟ್ಟು, ಪಸರಿಸಲು ಶ್ರಮಿಸಿದ ಆಂದೋಲನದ ಸಂಪಾದಕರು, ವರದಿಗಾರರು, ಛಾಯಾಗ್ರಾಹಕರು , ತಾಂತ್ರಿಕ ವರ್ಗದವರು ಹಾಗೂ ಬಹು ಮುಖ್ಯವಾಗಿ ಆಂದೋಲನವನ್ನು ಬೆಂಬಲಿಸುತ್ತಿರುವ ನೂರು ಸಾವಿರ ವೀಕ್ಷಕರಿಗೆ ನಮ್ಮ ಅಭಿನಂದನೆಗಳು! ಇದರೊಂದಿಗೆ ಆಂದೋಲನವು ಕರುನಾಡಿನ ಹಳ್ಳಿ ಹಳ್ಳಿಗಳನ್ನು ತಲುಪುವಂತಾಗಲಿ ಹಾಗೂ ಪ್ರಿಂಟ್ ಮಾಧ್ಯಮವಾಗಿಯೂ ಆಂದೋಲನ ದಿನಪತ್ರಿಕೆಯು ಬೆಳೆದು ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರ ಕನಸು ನನಸಾಗಲಿ ಎಂದು ಹಾರೈಸುತ್ತೇನೆ.
-ಒಡನಾಡಿ ಸ್ಟ್ಯಾನಿ




