ಭೇರ್ಯ ಮಹೇಶ್
ಕೆ.ಆರ್.ನಗರ: ಧರ್ಮಸ್ಥಳ ಸಂಸ್ಥೆಯಿಂದ ಕೆರೆ ಅಭಿವೃದ್ಧಿ; ಗ್ರಾಮಸ್ಥರು, ರೈತರಿಂದಲೂ ಸಹಕಾರ
ಕೆ.ಆರ್.ನಗರ: ಹೂಳು ತುಂಬಿ ಅವನತಿಯ ಹಾದಿ ಹಿಡಿಯುತ್ತಿರುವ ಕೆರೆಗಳನ್ನು ಗುರುತಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆರೆಗಳಿಗೆ ಪುನಶ್ಚೇತನ ನೀಡುವ ಕಾರ್ಯ ಮಾಡುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಧರ್ಮಸ್ಥಳ ಸಂಸ್ಥೆಯು ಇದುವರೆಗೂ ೩೨ ಹಾಗೂ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ೧೫ಕ್ಕೂ ಅಧಿಕ ಕೆರೆಗಳ ಹೂಳು ತೆಗೆದು, ಸ್ಥಳೀಯ ರೈತರು, ಪ್ರಾಣಿ-ಪಕ್ಷಿಗಳ ನೀರಿನ ದಾಹ ತೀರಿಸುತ್ತಿದೆ.
ಇದೇ ರೀತಿ ಪಟ್ಟಣದ ಹೊರವಲಯದಲ್ಲಿರುವ ಅರಕೆರೆ ಗ್ರಾಮದ ಅಗಸನಕೆರೆ ಪ್ರಸ್ತುತ ವರ್ಷ ಮಳೆಗಾಲದಲ್ಲಿ ತುಂಬಿದರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಿಸಲಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಂಸ್ಥೆಗೆ ಗ್ರಾಮಸ್ಥರು ಕೆರೆ ಹೂಳೆತ್ತುವ ಕುರಿತಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಯಂತೆ ಕೆರೆ ಅಭಿವೃದ್ಧಿ ಸಮಿತಿ ಮಾಡಿಕೊಂಡು ಮಾರ್ಚ್ನಲ್ಲಿ ಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಯಿತು. ಹೂಳೆತ್ತುವ ಮುನ್ನ ಸಾಕಷ್ಟು ಸವಾಲುಗಳಿದ್ದವು. ಆದರೆ ಅದರ ಮಹತ್ವ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು, ರೈತರೂ ಕೂಡ ಹೂಳೆತ್ತಲು ಸಹಕಾರ ನೀಡಿದರು. ಸುಮಾರು ಒಂದು ಸಾವಿರದಷ್ಟು ಟ್ರಿಪ್ಗಳಷ್ಟು ಹೂಳನ್ನು ಕೆರೆಯಿಂದ ತೆಗೆಯಲಾಗಿದೆ.
ಇಂಜಿನಿಯರ್ ಪುಷ್ಪರಾಜ್ ಪ್ರಕಾರ, ಕೆರೆಯಲ್ಲಿ ಸುಮಾರು ೬.೬೯ ಲಕ್ಷ ಲೀಟರ್ ಗ್ಯಾಲನ್ ಸಾಮರ್ಥ್ಯದಷ್ಟು ನೀರು ನಿಲ್ಲುವಷ್ಟು ಆಳವಾಗಿ ಹೂಳೆತ್ತಲಾಗಿದೆ. ನೂರಾರು ವರ್ಷಗಳ ಕಾಲ ಬಿಟ್ಟರೂ ಕೆರೆ ಹೂಳು ತುಂಬದಂತೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು, ರೈತರ ಸಹಕಾರ, ಹಿರಿಯ ಸಿಬ್ಬಂದಿ ಮಾರ್ಗದರ್ಶನದಿಂದ ಅರಕೆರೆ ಅಗಸನ ಕೆರೆಯ ಹೂಳು ತೆಗೆಯಲಾಗಿದೆ. ಇದರಿಂದ ಹಲವಾರು ಗ್ರಾಮಗಳ ಕೊಳವೆಬಾವಿಗಳ ಅಂತರ್ಜಲ ವೃದ್ಧಿ ಆಗಲಿದೆ. ಅಲ್ಲದೆ , ಸ್ಥಳೀಯ ರೈತರ ಜಾನುವಾರುಗಳಿಗೆ ಪ್ರಾಣಿ-ಪಕ್ಷಿಗಳಿಗೆ ನೀರಿನ ದಾಹ ತೀರಲಿದೆ.
” ಮುಂದಿನ ದಿನಗಳಲ್ಲಿ ಕೆರೆ ದಂಡೆಯ ಮೇಲೆ ಗಿಡಗಳನ್ನು ನೆಡಲಾಗುವುದು. ಗ್ರಾಮಸ್ಥರು ಮುಂಜಾನೆ ಮತ್ತು ಸಂಜೆ ಈ ಕೆರೆಯ ದಂಡೆಯ ಮೇಲೆ ವಾಯು ವಿಹಾರ ಮಾಡಬಹುದಾಗಿದೆ. ದಾನಿಗಳ ನೆರವು ಪಡೆದು ಕುಳಿತುಕೊಳ್ಳಲು ಆಸನಗಳು ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ತಂತಿಬೇಲಿ ಹಾಕಿ ಬಂದೋಬಸ್ತ್ಮಾ ಡಿದರೆ ಕೆರೆ ಸಂರಕ್ಷಣೆಯಾಗುತ್ತದೆ. ನೀರೂ ಮಲಿನವಾಗದಂತೆ ನೋಡಿಕೊಳ್ಳಬೇಕು.”
-ಸದಾನಂದ್ ದೇವಾಡಿಗ, ತಾಲ್ಲೂಕು ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
” ಧರ್ಮಸ್ಥಳ ಸಂಸ್ಥೆಯು ಕೆರೆಯ ಹೂಳೆತ್ತಿ ಕೊಟ್ಟಿದೆ. ಇದರಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರ ಬದುಕು ಹಸನಾಗಲಿದೆ. ಗ್ರಾಪಂ ಆಡಳಿತ ಸೂಕ್ತವ್ಯವಸ್ಥೆ ಮಾಡಿದರೆ ನೀರು ಹೆಚ್ಚು ಹಾಳಾಗುವುದಿಲ್ಲ. ದನ-ಕರುಗಳಿಗೂ ನೀರು ದೊರೆಯಲಿದೆ.”
-ಎ.ಎಸ್.ಯೋಗೇಶ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಅರಕೆರೆ




