Mysore
21
overcast clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ಓದುಗರ ಪತ್ರ

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ ಎಂಬುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಆದರೆ, ಇದು ಸಹಜ ಬೆಳವಣಿಗೆ. ಅಭಿಮನ್ಯುವಿನ ನೇತೃತ್ವದಲ್ಲಿ ಗಜಪಡೆ ಮೆರವಣಿಗೆ ಹೊರಟರೆ, ನೋಡುಗರ ಕಣ್ಣಿಗೆ ಹಬ್ಬವಾಗುತ್ತಿತ್ತು.

ಅಭಿಮನ್ಯು ದಸರೆಯಲ್ಲಿ ಮಾತ್ರವಲ್ಲದೆ, ಕಾಡಾನೆಗಳು, ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿಯೂ ಪಾಲ್ಗೊಳ್ಳುತ್ತಿದ್ದುದು ಗಮನಾರ್ಹ. ಅಭಿಮನ್ಯುವನ್ನು ದಸರಾ ಕಾರ್ಯಭಾರದಿಂದ ಬಿಡುಗಡೆ ಮಾಡುತ್ತಿರುವುದಕ್ಕೆ ವಯಸ್ಸಿನ ಕಾರಣ ನೀಡಲಾಗಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ತೀರ್ಪು ಕೂಡ ೬೦ ವರ್ಷ ವಯಸ್ಸು ಮೀರಿದ ಆನೆಗಳ ಮೇಲೆ ಒತ್ತಡ ಹಾಕದಂತೆ ಸೂಚಿಸಿದೆ. ಇದರಿಂದಾಗಿ ಅಭಿಮನ್ಯು ಆನೆಯನ್ನು ದಸರಾ ಉತ್ಸವದಿಂದ ಕೈಬಿಡಲಾಗಿದೆ. ಹಾಗಾಗಿ ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರಲಿರುವ ಆನೆ ಯಾವುದು ಎಂಬ ಕುತೂಹಲ ಜನರಲ್ಲಿ ಗರಿಗೆದರಿದೆ. ಇದೇ ತಿಂಗಳ ೨೬ರಂದು ದಸರಾ ಗಜಪಡೆ ಮೈಸೂರಿಗೆ ಆಗಮಿಸಲಿದೆ ಎನ್ನಲಾಗಿದೆ. ಬಹುಶಃ ಅಷ್ಟರೊಳಗೆ ಅಂಬಾರಿ ಆನೆ ಯಾವುದು ಎಂಬುದು ಇತ್ಯರ್ಥವಾದರೆ ಒಳ್ಳೆಯದು. ಅದರಿಂದ ಅಭಿಮನ್ಯು ನಿರ್ಗಮನದಿಂದ ಉಂಟಾಗಿರುವ ಬೇಸರ ಮರೆಯಾಗಬಹುದು. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು.

-ಜಿ.ಎಸ್.ಪ್ರಸಾದ್, ಗೋಕುಲಂ, ಮೈಸೂರು

Tags:
error: Content is protected !!