ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸಾಕಷ್ಟು ಬಸ್ ಸೌಲಭ್ಯವಿಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಶನಿವಾರ, ಭಾನುವಾರಗಳಂದು ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ತಳ್ಳಾಟ, ನೂಕಾಟಗಳು ಹಾಗೂ ಕೈಕೈ ಮಿಲಾಯಿಸುವ ಪ್ರಸಂಗಗಳು ನಡೆಯುತ್ತಿದ್ದರೂ ನಿಲ್ದಾಣದಲ್ಲಿರುವ ಪೊಲೀಸರು ಮೂಕ ಪ್ರೇಕ್ಷಕರಾಗಿರುತ್ತಾರೆ. ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಪುರುಷರಿಗಿಂತಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಜನ ಸಂದಣಿಯಲ್ಲಿ ಮಕ್ಕಳೊಂದಿಗೆ ಬಸ್ ಹತ್ತಲು ಹರ ಸಾಹಸ ಪಡಬೇಕಾಗಿದೆ. ಸಾರಿಗೆ ನಿಗಮದ ಅಧಿಕಾರಿಗಳು ಕೂಡಲೇ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ನಾಗರಾಜಪ್ಪ, ಚಿಕ್ಕಬಳ್ಳಾಪುರ




