ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ ಮೈದಾನದ ಸ್ಥಳವನ್ನು ಶುದ್ಧೀಕರಿಸಿರುವುದು ಮೌಢ್ಯ ಮತ್ತು ಜಾತಿವಾದಿ ಮನಸ್ಸುಗಳ ಕ್ರೌರ್ಯವಾಗಿದೆ. ಉನ್ನತ ಸ್ಥಾನದಲ್ಲಿರುವ ಖರ್ಗೆ ಅವರನ್ನೇ ಜಾತೀಯತೆಯ ಭೂತಗನ್ನಡಿಯಲ್ಲಿ ನೋಡುತ್ತಿರುವ ಜಾತಿ ವ್ಯಸನಿಗಳು ಸಮಾಜಕ್ಕೆ ಮಾರಕ. ಸ್ಥಳೀಯ ಸರ್ಕಾರ್ ತಿಪ್ಪೆ ತಾರಿಸುವ ಕೆಲಸವನ್ನು ಬಿಟ್ಟು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಈ ಅಮಾನವೀಯ ಕೆಲಸಕ್ಕೆ ಒತ್ತಾಸೆಯಾಗಿದೆ ಎಂದು ಅರ್ಥೈಸಬೇಕಾಗುತ್ತದೆ. ದೂರಗಾಮಿ ನೆಲೆಯಲ್ಲಿ ಈ ಪ್ರಕರಣ ಸಾಂಪ್ರದಾಯಿಕ, ಮೌಢ್ಯಕ್ಕೆ ಅಂಟಿಕೊಂಡಿರುವವರಿಗೆ ತಕ್ಕ ಪಾಠ ಕಲಿಸುತ್ತದೆ. ಆದರೆ, ಈ ಪ್ರಕರಣದ ಸಂಬಂಧ ದೇಶಾದ್ಯಂತ ದಲಿತ ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರತಿರೋಧ ಕಾಣುತ್ತಿಲ್ಲ ಎಂಬುದು ಆಶ್ಚರ್ಯಕರಸಂಗತಿ. ದಲಿತ ಹೋರಾಟಗಾರರು ಅಲ್ಲಲ್ಲಿ ಬಿಡಿ ಬಿಡಿಯಾಗಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆದರೆ, ದಲಿತ ಸಚಿವರು, ಶಾಸಕರು, ಸಂಸದರು ಗಟ್ಟಿಧ್ವನಿಯಲ್ಲಿ ಪ್ರಶ್ನಿಸಬೇಕಿತ್ತು. ಈ ಪ್ರಕರಣದ ವಿರುದ್ಧ ವಿಧಾನ ಪರಿಷತ್ನಲ್ಲಿ ಖಂಡನಾ ನಿರ್ಣಯ ಕೈಗೊಂಡಿರುವುದು ನೊಂದ ಮನಸ್ಸುಗಳಿಗೆ ಒಂದಿಷ್ಟು ಸಮಾಧಾನ ತಂದಿದೆ. ಆದರೆ, ಈ ಪ್ರಕರಣ ತಾರ್ಕಿಕವಾಗಿ ಅಂತ್ಯ ಕಾಣಲೇಬೇಕು. ಈ ಬಗ್ಗೆ ಎಲ್ಲ ಜನಪ್ರತಿನಿಧಿಗಳು, ವಿಶೇಷವಾಗಿ ದಲಿತ ಸಮುದಾಯಗಳಿಂದ ಆಯ್ಕೆಯಾಗಿರುವವರು ತಮ್ಮ ಸ್ಥಾನಗಳನ್ನು ಬದಿಗಿಟ್ಟು, ಈ ಅಮಾನುಷ ಪ್ರಕರಣವನ್ನು ಪ್ರಶ್ನಿಸಿ, ಹೋರಾಟಕ್ಕಿಳಿಯಬೇಕು.
-ಎಂ.ಎನ್.ಶಂಕರ್, ಗಾಂಧಿನಗರ, ಮೈಸೂರು




