ರಾಜ್ಯದಲ್ಲಿ ೪,೦೦೦ಕ್ಕೂ ಹೆಚ್ಚು ಸಣ್ಣ ಕೈಗಾರಿಕಾ ಘಟಕಗಳು ಮುಚ್ಚುವ ಭೀತಿಯಲ್ಲಿರುವ ವರದಿ ಆತಂಕಕಾರಿ ಸಂಗತಿಯಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ದಿಢೀರನೆ ೯೯೩ ರೂ. ಏರಿಕೆಯಾಗಿದ್ದು, ಈಗ ಪ್ರತಿ ಸಿಲಿಂಡರ್ಗೆ ೩,೧೫೨ ರೂ. ನೀಡಿ ಖರೀದಿಸುವುದು ಅನಿವಾರ್ಯವಾಗಿದೆ. ಕಾಳಸಂತೆಯಲ್ಲಿ ೪,೫೦೦ ರೂ. ರವರೆಗೆ ಮಾರಾಟವಾಗುತ್ತಿರುವುದು ಸಣ್ಣ ಉದ್ದಿಮೆದಾರರ ಪಾಲಿಗೆ ಮರಣ ಶಾಸನವಾಗಿದೆ. ವಾರಕ್ಕೆ ೨೦ ಸಿಲಿಂಡರ್ಗಳು ಅಗತ್ಯವಿರುವ ಘಟಕಗಳಿಗೆ ಕೇವಲ ೩ ಸಿಲಿಂಡರ್ಗಳು ಪೂರೈಕೆಯಾಗುತ್ತಿರುವುದು ಉತ್ಪಾದನಾ ಸರಪಳಿಯನ್ನೇ ಕಡಿದುಹಾಕಿದೆ. ಇಂಧನ ವೆಚ್ಚ ಮೂರು ಪಟ್ಟು ಹೆಚ್ಚಾಗಿದ್ದರೂ, ಮುಂಚಿತವಾಗಿ ಮಾಡಿಕೊಂಡ ಒಪ್ಪಂದಗಳಿಂದಾಗಿ ಬೆಲೆ ಏರಿಸಲಾಗದೆ ಉದ್ದಿಮೆಗಳು ನಲುಗುತ್ತಿವೆ. ಜಾಗತಿಕ ಸಂಘರ್ಷಗಳ ನೆಪವೊಡ್ಡಿ ಪೂರೈಕೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು ಲಕ್ಷಾಂತರ ಕಾರ್ಮಿಕರ ಜೀವನದ ಮೇಲೆ ಬರೆ ಎಳೆಯುತ್ತಿದೆ. ಸರ್ಕಾರವು ಮಧ್ಯಪ್ರವೇಶಿಸಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಬೇಕು. ಎಂ.ಎಸ್.ಎಂ.ಇ. ವಲಯಕ್ಕೆ ವಿಶೇಷ ಇಂಧನ ರಿಯಾಯಿತಿ ನೀಡದಿದ್ದರೆ ರಾಜ್ಯದ ಆರ್ಥಿಕ ಬೆನ್ನೆಲುಬು ಮುರಿಯುವುದರಲ್ಲಿ ಸಂಶಯವಿಲ್ಲ.
-ಡಾ.ಎಚ್.ಕೆ. ವಿಜಯಕುಮಾರ್, ಬೆಂಗಳೂರು





