Mysore
24
overcast clouds

Social Media

ಭಾನುವಾರ, 17 ಮೇ 2026
Light
Dark

ನಂಜನಗೂಡು ನಗರಸಭೆ ವಾರ್ಡ್ ವಿಂಗಡಣೆ ; ಒಂದರಲ್ಲಿ ಸಾವಿರ ; ಮತ್ತೊಂದರಲ್ಲಿ 6 ಸಾವಿರ ಜನ

ಅವೈಜ್ಞಾನಿಕ ಜನಸಂಖ್ಯೆ ವಿಂಗಡಣೆ ಬಗ್ಗೆ ಸಾರ್ವಜನಿಕರ ಆಕ್ಷೇಪ

ಎಸ್. ಎಸ್. ಭಟ್
ನಂಜನಗೂಡು : ನಗರದಲ್ಲಿ ೧,೦೨೩ ಜನರಿಗೆ ಒಂದು ವಾರ್ಡ್. ಆದರೆ ಅದರ ಪಕ್ಕದ ವಾರ್ಡ್‌ಗೆ ೬,೦೦೦ಕ್ಕೂ ಹೆಚ್ಚು ಜನರನ್ನು ಸೇರಿಸಲಾಗಿದೆ. ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾದ ನಂಜನಗೂಡು ನಗರಸಭೆಯ ವಾರ್ಡ್‌ಗಳ ವಿಂಗಡಣೆ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

೨೮ ವಾರ್ಡ್‌ಗಳಿದ್ದ ನಂಜನಗೂಡು ಪುರಸಭೆಯನ್ನು ೨೦೧೬ರಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಯಿತು. ನಂತರ ೨೮ ವಾರ್ಡ್ ಗಳಿದ್ದುದನ್ನು ೩೧ ವಾರ್ಡ್‌ಗಳನ್ನಾಗಿ ವಿಸ್ತರಿಸಲಾಯಿತು. ಈ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕೆಲವು ಪ್ರದೇಶಗಳನ್ನು ನಗರಸಭೆಗೆ ಸೇರ್ಪಡೆಗೊಳಿಸ ಲಾಯಿತು. ಆದರೆ ೨೦೧೯ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಗ್ರಾಪಂ ವ್ಯಾಪ್ತಿಯಿಂದ ನಗರಸಭೆ ವಾರ್ಡ್‌ಗೆ ಸೇರ್ಪಡೆಗೊಂಡಿದ್ದ ಮತದಾರರನ್ನು ನಗರಸಭೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡದೇ ಚುನಾವಣೆ ನಡೆಸಲಾಯಿತು.

ನಂತರ ೨೦೨೦ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಎದುರಾಯಿತು. ಆದರೆ ಆಗಲೇ ದೇವೀರಮ್ಮನಹಳ್ಳಿ ಹಾಗೂ ದೇಬೂರು ಗ್ರಾಪಂ ವ್ಯಾಪ್ತಿಯಿಂದ ನಂ. ಗೂಡು ನಗರಸಭೆಗೆ ಸೇರ್ಪಡೆಗೊಂಡಿದ್ದವರನ್ನು ಗ್ರಾಪಂ ಚುನಾವಣೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಅಽಕಾರಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಪಂನಿಂದ ನಗರಸಭೆಗೆ ಸೇರ್ಪಡೆ ಗೊಂಡಿದ್ದವರಿಗೆ ಎರಡೂ ಚುನಾವಣೆಗಳಲ್ಲೂ ಮತದಾನದ ಹಕ್ಕು ಸಿಗದಂತಾಯಿತು. ಹಾಗಾಗಿ ಇಲ್ಲಿನ ಕೆಲವು ಮತದಾರರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನದ ಹಕ್ಕೇ ಇಲ್ಲದೇ ೮ ವರ್ಷಗಳನ್ನು ಕಳೆದಿದ್ದಾರೆ. ಈ ವರೆಗೂ ಗಾಢನಿದ್ರೆಯಲ್ಲಿದ್ದ ನಗರಸಭೆ ಅಧಿಕಾರಿಗಳು ಈಗ ವಾರ್ಡ್ ವಿಂಗಡಣೆ ಮಾಹಿತಿ ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಮೇ ೮ ಕೊನೆಯ ದಿನ ಎಂದು ಹೇಳಿದ್ದಾರೆ.

ಆದರೆ ವಾರ್ಡ್‌ಗಳ ವಿಂಗಡಣೆಯಲ್ಲಿ ವಾರ್ಡ್‌ವಾರು ಜನಸಂಖ್ಯೆಯಲ್ಲಿ ಅಜಗ ಜಾಂತರ ವ್ಯತ್ಯಾಸವಿದೆ. ಒಂದು ವಾರ್ಡ್‌ನಲ್ಲಿ ೧೦೨೩ ಮಂದಿ ಜನಸಂಖ್ಯ ಇದ್ದರೆ, ಪಕ್ಕದ ವಾಡ್ ನಲ್ಲಿ ೬,೦೦೦ ಜನ ಸಂಖ್ಯೆ ಇದೆ. ಇದೇ ರೀತಿ ನಾಲ್ಕು ವಾರ್ಡ್‌ಗಳ ಜನಸಂಖ್ಯೆ ಅತೀ ಹೆಚ್ಚಾಗಿದೆ.

೩೧ ವಾರ್ಡ್‌ಗಳ ಪೈಕಿ ದೇವೀರಮ್ಮನಹಳ್ಳಿ, ದೇಬೂರು ಗ್ರಾಮ ಪಂಚಾಯಿತಿಯಿಂದ ನಗರಸಭೆಗೆ ಸೇರ್ಪಡೆಯಾದ ಪ್ರದೇಶಗಳ ೭,೬೯೮ ಜನರಲ್ಲಿ ೬,೫೯೦ ಜನರನ್ನು ಕೇವಲ ಮೂರು ವಾರ್ಡ್‌ಗಳಿಗೆ ಅಂದರೆ ೧೮, ೨೧, ೨೩ನೇ ವಾರ್ಡ್‌ಗಳಿಗೆ ಮಾತ್ರ ಹಂಚಕೆ ಮಾಡಲಾಗಿದೆ. ಅದರಲ್ಲಿ ೫೦೦೦ಕ್ಕೂ ಹೆಚ್ಚು ಜನರನ್ನು ೨೧ನೇ ವಾರ್ಡ್‌ಗೇ ಸೇರಿಸಲಾಗಿದೆ. ಇದರಿಂದ ಆ ವಾರ್ಡ್‌ನ ಜನಸಂಖ್ಯೆ ೬೦೦೦ಕ್ಕೂ ಹೆಚ್ಚಾಗಲಿದೆ.

ದೇಬೂರು ಗ್ರಾಮ ಪಂಚಾಯಿತಿಯಿಂದ ನಗರಸಭಾ ವ್ಯಾಪ್ತಿಗೆ ಬಂದ ೧,೧೦೮ ಜನರನ್ನು ೩೧ನೇ ವಾರ್ಡ್‌ಗೆ ಸೇರಿಸಿ ಕೈತೊಳೆದುಕೊಳ್ಳ ಲಾಗಿದೆ. ಇದರಿಂದಾಗಿ ೩೦ನೇ ವಾರ್ಡ್‌ನಲ್ಲಿ ಕೇವಲ ೧,೦೨೩ ಜನರಿದ್ದಾರೆ. ೧,೩೨೦ ಜನರಿದ್ದ ೨೧ನೇ ವಾರ್ಡ್‌ಗೆ ಹೊಸದಾಗಿ ೫,೦೦೦ಕ್ಕೂ ಹೆಚ್ಚು ಜನರನ್ನು ಸೇರಿಸಿರುವುದರಿಂದ ಅಲ್ಲಿನ ಜನಸಂಖ್ಯೆ ೬,೩೨೦ ದಾಟುತ್ತಿದೆ. ಈ ರೀತಿಯಾದರೆ ಮುಂದೆ ಸೌಲಭ್ಯಗಳನ್ನು ಯಾವ ಆಧಾರದ ಮೇಲೆ ಹಂಚಿಕೆ ಮಾಡುತ್ತಾರೆ ಎಂದು ಇಲ್ಲಿನ ನಾಗರಿಕರು ಪ್ರಶ್ನಿಸಿದ್ದಾರೆ. ಪೌರಾಡಳಿತ ಕಾನೂನು ೧೯೬೪ರ ಪ್ರಕಾರ ಸಮಾನ ಜನಸಂಖ್ಯೆ ಆಧಾರದಲ್ಲೇ ವಾರ್ಡ್‌ಗಳನ್ನು ರಚಿಸಬೇಕು ಎಂಬುದನ್ನು ಕಡ್ಡಾಯ ಗೊಳಿಸಲಾಗಿದೆ. ಆದರೆ ಇಲ್ಲಿ ಒಂದು ವಾರ್ಡ್‌ಗೆ ೧೦೨೩, ಇನ್ನೊಂದಕ್ಕೆ ೬೦೦೦ಕ್ಕೂ ಹೆಚ್ಚು ಜನರನ್ನು ಸೇರಿಸಲಾಗಿದೆ. ಇದು ವಾರ್ಡ್ ರಚನೆಯ ಮಾನದಂಡ ಹಾಗೂ ಕಾನೂನಿನ ಸ್ಪಷ್ಟ ಉಲ್ಲಂಘನೆ.

Tags:
error: Content is protected !!