ವಿಚ್ಛೇದನ ಸಿಕ್ಕಿದ್ದಕ್ಕೆ ವ್ಯಕ್ತಿಯೊಬ್ಬ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ಅಚ್ಚರಿಯೂ, ಆತಂಕವೂ ಆಯಿತು. ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದರಿಂದ ಬೇಸತ್ತು ಮಗಳ ಭವಿಷ್ಯಕ್ಕಾಗಿ ಇವೆಲ್ಲವನ್ನು ಸಹಿಸಿಕೊಂಡಿದ್ದ ಆತ ಕೋರ್ಟ್ ನಿಂದ ಅಧಿಕೃತವಾಗಿ ವಿಚ್ಛೇದನ ಸಿಕ್ಕ ಖುಷಿಗೆ ಲೀಟರ್ ಗಟ್ಟಲೆ ಹಾಲಿನಲ್ಲಿ ಸ್ನಾನ ಮಾಡಿ ನಾನು ಇನ್ನು ಸ್ವತಂತ್ರ ಎಂದು ಸಂಭ್ರಮಿಸಿದ್ದಾನೆ!
ಗಂಡಂದಿರು ಹೆಂಡತಿಯರಿಗೆ ಮೋಸ ಮಾಡುತ್ತಾರೆ! ಹಾಗೊಂದು ಮಾತು ನಮ್ಮಲ್ಲಿದೆ. ಆದರೆ ಈಗ ಕಾಲ ಬದಲಾಗಿದೆ! ಮೋಸ ಮಾಡು ವುದರಲ್ಲಿ ಹೆಂಡತಿಯರು ಗಂಡಂದಿರ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ ಎನಿಸುತ್ತದೆ.
ನಮ್ಮ ದೇಶದಲ್ಲಿ ಮದುವೆಗೆ ನಂಬಿಕೆಯೇ ತಳಹದಿ. ಗಂಡ ಹೆಂಡತಿಯಲ್ಲಿ ಅಥವಾ ಹೆಂಡತಿ ಗಂಡನಲ್ಲಿ ನಂಬಿಕೆ ಕಳೆದುಕೊಂಡರು ಅಂದರೆ ದಾಂಪತ್ಯ ಮುರಿದು ಬಿತ್ತು ಎಂದರ್ಥ. ಕಾನೂನು ಬದ್ಧವಾಗಿ ವಿಚ್ಛೇದನ ನೀಡುವುದು ಔಪಚಾರಿಕವಷ್ಟೇ. ದಾಂಪತ್ಯದಲ್ಲಿ ನಂಬಿಕೆ ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣ ಸಂಗಾತಿಗಳಲ್ಲಿ ಒಬ್ಬರು ಇನ್ನೊಬ್ಬರಿಗೆ ಮಾಡುವ ಮೋಸ, ವಿಶ್ವಾಸದ್ರೋಹ. ಆದರೆ ಇತ್ತೀಚೆಗಂತೂ ನಂಬಿಕೆ ದ್ರೋಹದ ಪ್ರಕರಣಗಳು ಹೆಚ್ಚಾಗಿ ಕೊಲೆ, ವಿಚ್ಛೇದನದಲ್ಲಿ ಅಂತ್ಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





