ಮಂಜು ಕೋಟೆ
ಎಚ್. ಡಿ. ಕೋಟೆ : ರಾಜ್ಯದ ಪ್ರಮುಖ ಜಲಾಶಯವಾದ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ ಮಳೆಯ ಕೊರತೆ ಮತ್ತು ಬಿಸಿಲಿನ ತಾಪಮಾನಕ್ಕೆ ತೀವ್ರವಾಗಿ ಕುಸಿತ ಕಂಡಿದ್ದು, ಜನಸಾಮಾನ್ಯರಿಗೆ ಮತ್ತು ಕಾಡುಪ್ರಾಣಿಗಳು, ಜಾನುವಾರುಗಳಿಗೆ ನೀರಿನ ಆತಂಕ ಎದುರಾಗಿದೆ.
ಕಬಿನಿ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಭಾರಿ ಕುಸಿತ ಕಾಣುತ್ತಿರುವುದರಿಂದ ರೈತರಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಜನಸಾಮಾನ್ಯ ರಿಗೆ ಆತಂಕ ಉಂಟಾಗುತ್ತಿದೆ.
ಇಷ್ಟರಲ್ಲಿ ತಾಲ್ಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಬೇಕಾಗಿತ್ತು. ಆದರೆ ಬಿಸಿಲಿನ ತಾಪಮಾನ ೩೬ ರಿಂದ ೩೮ ಡಿಗ್ರಿ ಸೆಲ್ಸಿಯಸ್ ಇದ್ದು, ಜಲಾಶಯ ಸೇರಿದಂತೆ ಅನೇಕ ಕೆರೆಕಟ್ಟೆಗಳು ಬರಿದಾಗುತ್ತಿವೆ.
ಇದೇ ನೀರನ್ನು ಅವಲಂಬಿಸಿರುವ ನಾಗರಹೊಳೆ, ಬಂಡೀಪುರ ಅಭಯಾರಣ್ಯದ ವನ್ಯಪ್ರಾಣಿಗಳಿಗೆ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ಜಾನುವಾರುಗಳು, ರೈತರು, ಜನಸಾಮಾನ್ಯರಿಗೆ ಈಗಾಗಲೇ ನೀರಿನ ಅಭಾವ ಕಂಡುಬರುತ್ತಿದೆ.
ತಾಲ್ಲೂಕಿನಲ್ಲಿ ಕಬಿನಿ, ನುಗು, ತಾರಕ, ಹೆಬ್ಬಾಳ ಜಲಾ ಶಯಗಳಿದ್ದರೂ ನೀರಾವರಿ ಪ್ರದೇಶಕ್ಕಿಂತ ಕೆರೆಕಟ್ಟೆಗಳನ್ನೇ ರೈತರು ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ಬಿಸಿಲಿನ ತಾಪಮಾನಕ್ಕೆ ರೈತರ ಜಮೀನುಗಳಲ್ಲಿ ಇದ್ದ ಬೋರ್ವೆಲ್ಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಮತ್ತೊಂದೆಡೆ ಕೆರೆ ಕಟ್ಟೆಗಳಲ್ಲೂ ನೀರು ಬತ್ತಿಹೋಗಿ ಜನರು ಪರದಾಡುತ್ತಿದ್ದಾರೆ. ಜಲಾಶಯಗಳಲ್ಲಿರುವ ನೀರನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಽಗಳು ಕೆರೆಕಟ್ಟೆಗೆ ತುಂಬಿಸುವ ಕೆಲಸ ಮಾಡಬೇಕಿದೆ. ಕಳೆದ ಸಾಲಿನಲ್ಲಿ ಏಪ್ರಿಲ್ ತಿಂಗಳ ಸಮಯದಲ್ಲಿ ಕಬಿನಿ ಜಲಾಶಯದಲ್ಲಿ ೬೬ ಅಡಿ ನೀರಿನ ಸಂಗ್ರಹವಿತ್ತು.
ಪ್ರಸ್ತುತ ೬೦ ಅಡಿಗಳಿಗೆ ಕುಸಿತವಾಗಿದೆ. ಜಲಾಶಯದಿಂದ ಕುಡಿಯುವ ನೀರಿಗಾಗಿ ಒಂದೂವರೆ ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಬಿಸಿಲಿನ ತಾಪಮಾನ ಇನ್ನೂ ಒಂದು ವಾರ ಹೀಗೆಯೇ ಮುಂದುವರಿದರೆ ಕಬಿನಿ ಸೇರಿದಂತೆ ಎಲ್ಲಾ ಜಲಾಶಯಗಳು ಮತ್ತು ಕೆರೆಕಟ್ಟೆಗಳು ನೀರಿಲ್ಲದೆ ಬತ್ತಿಹೋಗಿ ರೈತರು ಬೆಳೆದ ಬೆಳೆಗಳು ಒಣಗುತ್ತಾ ಮತ್ತು ಜಾನುವಾರುಗಳು, ಕಾಡುಪ್ರಾಣಿಗಳಿಗೆ ಹಾಗೂ ಜನಸಾಮಾನ್ಯರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಮಳೆಯಾಗುವುದೊಂದೇ ಪರಿಹಾರ ವಾಗಿದ್ದು, ಅಷ್ಟರಲ್ಲಿ ಇರುವ ನೀರನ್ನು ಜಾಗ್ರತೆಯಿಂದ ಸದ್ಬಳಕೆ ಮಾಡಿಕೊಳ್ಳಲು ಎಲ್ಲರೂ ಮುಂದಾಗಬೇಕಿದೆ.
ಕಬಿನಿ ಜಲಾಶಯದಲ್ಲಿ ಬಿಸಿಲಿನ ತಾಪಮಾನಕ್ಕೆ ಭಾರಿ ಪ್ರಮಾಣದಲ್ಲಿ ನೀರು ಕುಸಿತ ಕಾಣುತ್ತಿದೆ. ಕುಡಿಯುವ ನೀರು ಮತ್ತು ಕೆರೆಕಟ್ಟೆಗಳಿಗೆ ನೀರು ಹರಿಸಲಾಗುತ್ತಿದ್ದು, ಮುಂಗಾರು ಮಳೆ ಈಗಾಗಲೇ ಪ್ರಾರಂಭವಾಗಬೇಕಾಗಿತ್ತು. ಆದರೆ, ಇನ್ನೂ ಆಗಿಲ್ಲ. ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ಬಹಳಷ್ಟು ಸಮಸ್ಯೆ ಎದುರಾಗಲಿದೆ. ಗಣೇಶ್, ಎಇಇ, ಕಬಿನಿ ಜಲಾಶಯ
ಕಬಿನಿ ಜಲಾಶಯದ ಹಿನ್ನೀರು ಮತ್ತು ಅರಣ್ಯದೊಳಗಿರುವ ಕೆರೆಕಟ್ಟೆಗಳಲ್ಲಿನ ನೀರು ಬಿಸಿಲಿನ ತಾಪಮಾನಕ್ಕೆ ಕಡಿಮೆಯಾಗಿದೆ. ಇದ ರಿಂದ ವನ್ಯ ಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗ ಲಿದ್ದು, ಕಾಡಿನೊಳಗೆ ಇರುವ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಅರಣ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಸಿದ್ದರಾಜು, ಅರಣ್ಯ ಅಧಿಕಾರಿ, ದಮ್ಮನಕಟ್ಟೆ





