Mysore
24
overcast clouds

Social Media

ಭಾನುವಾರ, 17 ಮೇ 2026
Light
Dark

ಒಂದೇ ವರ್ಷದಲ್ಲಿ ಕಿತ್ತು ಬಂದ ರಸ್ತೆಯ ಜಲ್ಲಿ ಕಲ್ಲು!

ಕೊಳ್ಳೇಗಾಲ: ಶಾಸಕರು ಮೊದಲಿದ್ದ ಡಾಂಬರು ರಸ್ತೆಯನ್ನು ಕಿತ್ತು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾದರೆ ಗುತ್ತಿಗೆದಾರ ನಡೆಸಿದ ಕಳಪೆಕಾಮಗಾರಿಯಿಂದ ಜಲ್ಲಿಕಲ್ಲುಗಳು ಮೇಲೆದ್ದು ಬಂದು ಸಂಚಾರಕ್ಕೆ ತೊಂದರೆಯಾಗಿದೆ.

ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿರವರು ಕೊಳ್ಳೇಗಾಲ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಇತರೆ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ೫೦ ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಈ ಪೈಕಿ ವೆಂಕಟೇಶ್ವರ ಮಹಲ್ ರಸ್ತೆ, ಜಯ ಇನ್‌ಸ್ಟಿಟ್ಯೂಟ್ ರಸ್ತೆ ಮತ್ತು ಕೆ.ಎಸ್. ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಿಷ್ಣುವರ್ಧನ್ ರಸ್ತೆಯ ಡಾಂಬರನ್ನು ತೆಗೆದು ಕಾಂಕ್ರೀಟ್ ರಸ್ತೆಯಾಗಿ ದುರಸ್ತಿಪಡಿಸಲು ಮೀಸಲಿರಿಸಿದ್ದರು. ಅದರಂತೆ ಕಳೆದ ವರ್ಷ ಸ್ಥಳೀಯ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆದಿದೆ. ಆದರೆ ಒಂದೇ ವರ್ಷದಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿಕಲ್ಲು ಕಿತ್ತು ಬರುತ್ತಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಅಲ್ಲದೆ, ರಸ್ತೆ ಅಭಿವೃದ್ಧಿ ಮಾಡುವಾಗ ಎರಡು ಕಡೆಯೂ ಬಾಕ್ಸ್ ಚರಂಡಿ ಮಾಡಿ ಮಳೆ ನೀರು ಹರಿದು ಹೋಗಲು ಸಂಪರ್ಕ ಕಲ್ಪಿಸಬೇಕಾಗಿತ್ತು. ಆದರೆ, ಆಂದೋಲನ ಸರ್ಕಲ್‌ನಿಂದ ದತ್ತ ಮೆಡಿಕಲ್‌ವರೆಗೆ ಎರಡೂ ಕಡೆಗಳಲ್ಲಿ ಅಂಗಡಿ ಮಾಲೀಕರು ಒತ್ತುವರಿ ಮಾಡಿ ಕಟ್ಟಡ ಕಟ್ಟಿಕೊಂಡಿರುವುದರಿಂದ ರಸ್ತೆ ಮಾಡುವ ಸಂದರ್ಭದಲ್ಲಿ ಅಕ್ರಮ ಕಟ್ಟಡಗಳನ್ನು ತೆರವು ಮಾಡಿಸದೆ, ಚರಂಡಿ ಕಾಮಗಾರಿ ಪೂರ್ಣಗೊಳಿಸದೆ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆದಿದೆ.

ಅಧಿಕಾರಿಗಳು ರಸ್ತೆ ಕಾಮಗಾರಿ ಸರಿಯಾಗಿದೆ ಎಂದು ದೃಢೀಕರಿಸಿರುವುದರಿಂದ ೩ ಕೋಟಿ ರೂ. ಬಿಡುಗಡೆಯಾಗಿ, ಗುತ್ತಿಗೆದಾರರಿಗೆ ಹಣ ಸಂದಾಯವಾಗಿದೆ ಎಂದು ತಿಳಿದುಬಂದಿದೆ. ಟೆಂಡರ್ ನಿಬಂಧನೆ ಪ್ರಕಾರ ಸಿಮೆಂಟ್, ಜಲ್ಲಿಕಲ್ಲು, ಎಂ.ಸ್ಯಾಂಡ್‌ಅನ್ನು ಬಳಸದೇ ಇದ್ದುದ್ದರಿಂದ ರಸ್ತೆ ಕಳಪೆಯಾಗಿ ಕೂಡಿದ್ದು, ಜಲ್ಲಿಕಲ್ಲು ಹಾಗೂ ಎಂ.ಸ್ಯಾಂಡ್ ಬೇರ್ಪಟ್ಟಿದೆ ಎನ್ನಲಾಗಿದೆ.

ಈ ಸಂಬಂಧ ಇಲ್ಲಿನ ನಿವಾಸಿಗಳನ್ನು ಪತ್ರಿಕೆ ಮಾತನಾಡಿಸಿದಾಗ, ಮೊದಲಿದ್ದ ಡಾಂಬರು ರಸ್ತೆ ಚೆನ್ನಾಗಿತ್ತು. ಸಿಮೆಂಟ್ ರಸ್ತೆಯಾದ ಮೇಲೆ ರಸ್ತೆ ದೂಳಿನಿಂದ ಕೂಡಿದ್ದು, ತೊಂದರೆ ಅನುಭವಿಸುವಂತಾಗಿದೆ. ಟೆಂಡರ್ ನಿಬಂಧನೆ ಪ್ರಕಾರ ರಸ್ತೆ ನಿರ್ವಹಣೆಯನ್ನು ೫ ವರ್ಷಗಳವರೆಗೆ ಗುತ್ತಿಗೆದಾರರು ನೋಡಿಕೊಳ್ಳಬೇಕಾಗಿದೆ. ಆದರೆ ಇಲ್ಲಿನ ತಾಂತ್ರಿಕ ವಿಭಾಗದವರು ಟೆಂಡರ್‌ದಾರರ ಜೊತೆ ಶಾಮೀಲಾಗಿ ಕಿತ್ತು ಹೋಗಿರುವ ರಸ್ತೆಯನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.

” ಸಾರ್ವಜನಿಕರ ಹಿತದೃಷ್ಟಿಯಿಂದ ಶಾಸಕರು ತಂದಿರುವ ಮೂರು ಕೋಟಿ ರೂ. ದುರುಪಯೋಗವಾಗದಂತೆ ನೋಡಿಕೊಳ್ಳಬೇಕಾಗಿದೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಚಾ.ನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ರವರು ಈ ರಸ್ತೆಗಳನ್ನು ಪರಿವೀಕ್ಷಿಸಿ ಕ್ರಮ ಕೈಗೊಳ್ಳಬೇಕು.”

ಸಾರ್ವಜನಿಕರು

Tags:
error: Content is protected !!