Mysore
23
overcast clouds
Light
Dark

ಆಂದೋಲನ ವರದಿಗೆ ಸ್ಪಂದನೆ: ಇಂಡಿಗನತ್ತ ಗ್ರಾಮಕ್ಕೆ ಜಿಲ್ಲಾಡಳಿತ ದೌಡು  

ವರದಿ: ಪ್ರಸಾದ್ ಲಕ್ಕೂರು | ಮಹದೇಶ್ ಎಂ.ಗೌಡ

ಹನೂರು: ಚಾಮರಾಜನಗರದ ಜಿಲ್ಲಾಡಳಿತವಿಡೀ ಅಲ್ಲಿ ನೆರೆದಿತ್ತು. ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ಹಾದಿಯಲ್ಲಿರುವ ಸಂರಕ್ಷಿತ ಅರಣ್ಯ ವ್ಯಾಪ್ತಿಗೆ ಸೇರಿದ ಇಂಡಿಗನತ್ತ ಮತ್ತು ಮಂದಾರೆ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಕಾಡಿನ ಜನರ ದಯನೀಯ ಬದುಕು ಮತ್ತು ಬವಣೆಗಳನ್ನು ಕಣ್ಣಾರೆ ಕಂಡರು. ಏಪ್ರಿಲ್ 26ರ ಮತದಾನ ದಿನದಂದು ನಡೆದ ಹಿಂಸಾತ್ಮಕ ಘಟನೆ ಸಂಬಂಧ ಜೈಲು ಸೇರುವ ಭೀತಿಯಲ್ಲಿರುವ ಜನರಿಗೆ ಧೈರ್ಯ ತುಂಬಿದರು. ಅವಳಿ ಗ್ರಾಮಗಳಿಗೆ ಶೀಘ್ರವೇ ‘ಅಭಿವೃದ್ಧಿಯ ಬೆಳಕು’ ತರುವ ವಾಗ್ದಾನ ನೀಡಿದರು. ಇದಕ್ಕೆಲ್ಲ ಕಾರಣವಾಗಿದ್ದು ‘ಆಂದೋಲನ’ ವರದಿ.

ಮೇ 13ರ ಸಂಚಿಕೆಯಲ್ಲಿ ಇಂಡಿಗನತ್ತ ಜನರ ದಾರುಣ ಬದುಕಿನ ಸಚಿತ್ರ ಚಿತ್ರಣವನ್ನು ನೀಡಲಾಗಿತ್ತು. ‘ಕುಗ್ರಾಮದ ಬದುಕೇ ಸಂಗ್ರಾಮ- ಏಪ್ರಿಲ್ 26ರ ಮತ ದಾನದ ಬಳಿಕ ನರಕವಾಯಿತು ಇಂಡಿಗನ ಜನರ ಬಾಳು’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಗೆ ತಕ್ಷಣ ಸ್ಪಂದಿಸಿದ ಡಿಸಿ ಶಿಲ್ಪಾನಾಗ್ ಅವರು, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಜಿಲ್ಲಾಧಿಕಾರಿ ವಾಗ್ದಾನ

* ಈ ಗ್ರಾಮದ 16 ಮಕ್ಕಳಿಗೆ ಮುಂದಿನ ತರಗತಿಗಳಿಗೆ ನೇರ ಪ್ರವೇಶಾವಕಾಶ
* ತಾಲ್ಲೂಕಿನ ವಿವಿಧ ಹಾಸ್ಟೆಲ್‌ಗಳಿಗೆ ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸಲು ಕ್ರಮ
* ಗ್ರಾಮಸ್ಥರಿಗೆ ನರೇಗಾ ಜಾಬ್ ಕಾರ್ಡ್
*‌ ಅವಳಿ ಗ್ರಾಮಗಳಿಗೆ ಸೋಲಾ‌ರ್ ಬೆಳಕಿನ ವ್ಯವಸ್ಥೆ
* ಮಳೆ ಬರುವವರೆಗೂ ಮೇವು ವಿತರಣೆ
* ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ಊಟದ ವ್ಯವಸ್ಥೆ

 

ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್.ಪಿ ಪದ್ಮಿನಿ ಸಾಹು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರ, ಡಿವೈಎಸ್ಪಿ ಧರ್ಮೇಂದ್ರ ಹಾಗೂ ಇತರರೊಡನೆ ಹನೂರು ತಾಲ್ಲೂಕಿನ ಮಲೆ ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವಳಿ ಗ್ರಾಮಗಳ ಗ್ರಾಮಸ್ಥರನ್ನು ಖುದ್ದು ಮಾತನಾಡಿಸಿ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಬಳಿಕ ‘ಆಂದೋಲನ’ದ ಜತೆ ಮಾತನಾಡಿ, ‘ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್ 26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣ ಮತ್ತು ಮಂದಾರೆ ಗ್ರಾಮಸ್ಥರ ಮೇಲಿನ ದಾಳಿಗೆ ಸಂಬಂಧಿಸಿ ಪ್ರಮುಖ ಆರೋಪಿಗಳನ್ನಷ್ಟೇ ವಶಕ್ಕೆ ಪಡೆದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇನ್ನೂ 6 ಮಂದಿ ಆರೋಪಿಗಳನ್ನು ಪೊಲೀಸರ ಮುಂದೆ ಶರಣಾಗಲು ತಿಳಿಸಲಾಗಿದೆ. ಉಳಿದವರು ಯಾವುದೇ ಭಯವಿಲ್ಲದೇ ಗ್ರಾಮಕ್ಕೆ ಬರುವಂತೆ ಈಗಾಗಲೇ ಮೂರು ಸಭೆಗಳನ್ನು ನಡೆಸಿ ಧೈರ್ಯ ತುಂಬಲಾಗಿದೆ. ಆದರೂ ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ಗಮನಿಸಿ ಮತ್ತೆ ಗ್ರಾಮಕ್ಕೆ ಬಂದಿದ್ದೇವೆ. ಗ್ರಾಮಸ್ಥರು ಭಯಪಡುವುದು ಬೇಡ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಸೋಮವಾರ ಎರಡೂ ಗ್ರಾಮಗಳ ಮನೆ ಮನೆಗೂ ಭೇಟಿ ನೀಡಿ ಕುಟುಂಬಸ್ಥರ ಮಾಹಿತಿ ಪಡೆದುಕೊಂಡು ಬಂದಿದ್ದೇವೆ. ರಕ್ಷಿತಾರಣ್ಯದಲ್ಲಿರುವ ಗ್ರಾಮಗಳಿಗೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ದೊರಕಿಸಿಕೊಡಲು ಜಿಲ್ಲಾಡಳಿತ ಈಗಾಗಲೇ ಕ್ರಿಯಾ ಯೋಜನೆ ಮಾಡಿ ಸರ್ಕಾರಕ್ಕೆ ಕಳುಹಿಸಿದೆ. ಹಣಕಾಸು ಇಲಾಖೆ ಅನುಮೋದನೆ ನೀಡಿದ ನಂತರ ಇಲ್ಲಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗುವುದು’ ಎಂದು ಶಿಲ್ಪಾನಾಗ್ ತಿಳಿಸಿದರು.