ನಂಜುಂಡನ ನೆಲೆ ವೀಡು
ರಸ ಬಾಳೆಯ ಬೀಡು
ನಂ ಜನರ ಗೂಡು
ನಮ್ಮ ಹೆಮ್ಮೆಯ ನಂಜನಗೂಡು
ಜುಳು ಜುಳು ಹರಿಯುತ
ತೀರ್ಥಕ್ಷೇತ್ರವಾಗಿಹುದಿಲ್ಲಿ
ಕಪಿಲೆಯ ಮಡಿಲು
ಹಚ್ಚಹಸಿರಾಗಿಹುದು
ಮಾತೆಯ ಒಡಲು!
ಸುತ್ತಮುತ್ತೆಲ್ಲ ಸುಕ್ಷೇತ್ರಗಳ ಲೀಲೆ
ಸುತ್ತೂರು, ದೇವನೂರು
ಸನ್ನಿಧಿಗಳ ಸಂಗಮ
ಮಲ್ಲನಮೂಲೆ
ಸಿನಿ ಕ್ಷೇತ್ರದ ದಿಗ್ಗಜರು
ಎಚ್ ಎಲ್ ಏನ್ ಸಿಂಹ,
ಜಿ. ವಿ. ಅಯ್ಯರು,
ಮರೆಯಲಾದೀತೆ ಪತ್ರಕರ್ತೆ
ಧೀರ ವನಿತೆ ತಿರುಮಲಾಂಬ
ಎಷ್ಟೊಂದು ಪ್ರಸಿದ್ಧಿ
ಗರಳಪುರಿಯ ಗರಿಗರಿ ಪುರಿ!
ಪಾಮರರೂ ಬಳಸುವ
‘ಪಂಡಿತರ’ ಹಲ್ಲು ಪುಡಿ
ಅಬ್ಬಾ ! ಎಂಥ ಹೆಸರು
ನಮ್ಮೂರ ರಸ್ತೆಗಳಿಗೆ ?!
ಒಂದು ರಾಷ್ಟ್ರಪತಿ ರಸ್ತೆ
ಮತ್ತೊಂದು ‘ರಾಷ್ಟ್ರಪಿತ’ನ ರಸ್ತೆ !
ತಲೆಯೆತ್ತಿವೆಯಿಲ್ಲಿ
ನೂರಾರು ಕೈಗಾರಿಕೆಗಳು
ಅಭಿವೃದ್ಧಿ ಮಾತಾಗಿರಲಿ
ಶಾಂತಿಯ ತೋಟದಲಿ
ನಿತ್ಯ ಅರಳುತ್ತಿವೆ
ಜನಮಾನಸದ ಹೂಗಳು!
-ಮ.ಗು.ಬಸವಣ್ಣ, ಜೆ ಎಸ್ ಎಸ್ ಸಂಸ್ಥೆ, ಸುತ್ತೂರು, ಮೈಸೂರು.