Mysore
28
moderate rain

Social Media

ಶನಿವಾರ, 13 ಜೂನ್ 2026
Light
Dark

ಅರ್ಜಿ ಬರೆದುಕೊಡುತ್ತಾ ಬರಹಗಾರನಾದೆ

 

ಮಧುಕರ ಮಳವಳ್ಳಿ
madhukaramalavalli@gmail.com

ಡಿಗ್ರಿ ಓದುವ ಸಮಯ ಮತ್ತು ಡಿಎಸ್‌ಎಸ್‌ನ ಚಳವಳಿಯ ಕಾವು ನನಗಿತ್ತು. ನಮ್ಮೂರು ಮಳವಳ್ಳಿ. ತಾಲ್ಲೂಕು ಕೇಂದ್ರ ಕೂಡ. ಸುತ್ತಮುತ್ತಲಿನ ಗ್ರಾಮದವರು ತಾಲ್ಲೂಕು ಕಚೇರಿಗೆ ಬರುತ್ತಿದ್ದರು. ಹಾಗೆ ಬಂದವರು ಟೀ-ಕಾಫಿ ಅಂಗಡಿಗೆ ಬಂದು ‘‘ಸ್ವಾಮಿ ಅಪ್ಪ’’ ಎನ್ನುತ್ತ ಜಾತಿ ಪ್ರಮಾಣಪತ್ರ, ಪೊಲೀಸ್ ಠಾಣೆಗೆ ಅರ್ಜಿ, ಪಿಂಚಣಿಗೆ ಇತ್ಯಾದಿಗೆ ಅರ್ಜಿ ಬರೆದುಕೊಡಿ ಎಂದು ಬಹಳ ಭಯ ಭಕ್ತಿಯಿಂದ ಕೇಳ್ತಿದ್ರು. ಇದ್ನೆಲ್ಲ ನೋಡುವಾಗ ಮನದಲ್ಲಿ ಒಂದು ರೀತಿಯ ತಾಕಲಾಟ.
ಒಂದಿನ ಸುಮಾರು ಪ್ರಾಯದ ಹೆಂಗಸು ಬಂದು ಟೀ ಕಂ ಸ್ಟೇಷನರಿ ಅಂಗಡಿಯ ಮುಂದೆ ಕುಳಿತಳು. ಸುಮಾರು ಹೊತ್ತು ಕಳೆದ ನಂತರ ಆ ಹೆಂಗಸು ‘ಅಣ್ಣ ಇಲ್ಲಿ ಅರ್ಜಿ ಬರ್ದು ಕೊಡ್ತಾರಲ್ಲಾ ಅವುತ್ರೃ ಬಂದಿಲ್ವಾ’ ಎಂದಳು. ‘ಯಾಕಮ್ಮ’ ಅಂದೆ. ‘ನಂಗೆ ಮುಂಡೆ ಪಿಂಚಣಿ ಮಾಡುಸ್ಬೇಕು’ ಅಂದಳು. ‘ಅಲ್ಲಮ್ಮ ನೀ ಓದಿಲ್ವಾ. ಒಂದ್ ಅರ್ಜಿ ಬರೆಯೋಕಾಗಲ್ವ’ ಅಂದೆ. ‘‘ಅಯ್ಯೋ ಹೆಣ್ಮಕ್ಳು ಹೆಚ್ಚು ಓದ್ಬಾರ್ದು ಅಂತ ನಮ್ ಮನೇಲಿ ಸ್ಕೂಲ್ ಬಿಡುಸ್ಬುಟ್ರು. ಅದು ಅಲ್ದೆ ನಾವು ತಳ’ ಆ ಜಾತಿಯವುತ್ರೃ. ನಮ್ಗೆ ಯಾಕಪ್ಪ ಓದು ಬರಹ, ನೀನು ಅರ್ಜಿ ಬರೆಯವ್ರ ತೋರ್ಸಪ್ಪ’’ ಅಂದಳು.

ಅರ್ಜಿ ಬರೆದುಕೊಡಲು ಇಪ್ಪತ್ತು ರೂಪಾಯಿ ಕೊಡಬೇಕಾಗುತ್ತೆ ಎಂದೆ. ಆ ಹೆಂಗಸು ‘ಫಸ್ಟ್ ಸರಿ ಬರುವ ಪಿಂಚಣಿಯ ಎಲ್ಲಾ ಅವರೆ ತಕ್ಕಳ್ಲಿ. ಅದು ಬರೋಹಂಗೆ ಮಾಡ್ಲಿ’ ಎನ್ನುತ್ತ ಕಣ್ಣೀರು ಹಾಕಿ ‘ನಂಗೆ ಯಾರು ದಿಕ್ಕುದೆಸೆ ಇಲ್ಲ. ಆ ಮುಂಡೆಮಗ ಏಡ್ ಮಕ್ಕಳ ಕೊಟ್ಬುಟ್ಟು ಮಣ್ ಪಾಲಾದ. ಕೂಲಿನಾಲಿ ಮಾಡಿ ಮಕ್ಕಳ ಸಾಕ್ತೀನಿ. ಸಣ್ಣಪುಟ್ಟ ಸಾಲ ಮಾಡುದ್ರೆ ಈ ದುಡ್ಡಿಂದ ಆ ಸಾಲ ತೀರುಸ್ಬಹುದು’ ಎಂದು ಧೈರ್ಯದಿಂದಲೇ ಹೇಳಿದಳು. ತಕ್ಷಣವೇ ಅಂಗಡಿಯಲ್ಲಿ ಹಾಳೆ ತೆಕ್ಕೊಂಡು ನನಗೆ ತಿಳಿದ ರೀತಿಯಲ್ಲಿ ಅರ್ಜಿ ಬರೆದುಕೊಟ್ಟೆ. ‘ಟೀ ನಾದ್ರು ಕುಡ್ಕಪ್ಪ’ ಎನ್ನುತ್ತ ಐದು ರುಪಾಯಿ ನೋಟ ಕೈಗಿಟ್ಟು ಹೊರಟಳು.

ಆಗ ನಾಲ್ಕು ಸಾಲು ಅರ್ಜಿ ಬರಸ್ಕೋಳೋಕೆ ಜನ ಅಕ್ಷರ ಜ್ಞಾನವಿಲ್ಲದೇ ಯಾಕ್ ಪರ್ದಾಡ್‌ಬೇಕು. ಇದಕ್ಕೆ ಏನಾರ ಮಾಡ್ಬೇಕು. ಅಂತ ಯೋಚನೆ ಶುರುವಾಯ್ತು. ಆಗ ಮನ್ಸಿಗೆ ಮೂಡಿದ್ದು ನಮ್ ಜನಕ್ಕೆ ಶಿಕ್ಷಣದ ಅರಿವು ಮೂಡುಸ್ಬೇಕು. ಅದನ್ನ ಹೇಳೋರೀತಿ ಹೆಂಗೆ ಅಂತ ಯೋಚ್ನೆ ಮಾಡಿ ಕವಿತೆ ಬರಿೋಂಕೆ ಶುರುಮಾಡ್ದೆ. ಒಂದೆರಡು ಕವಿತೆಗಳು ಸ್ಥಳೀಯ ಪತ್ರಿಕೇಲಿ ಪ್ರಕಟವಾದ್ವು. ಮತ್ತೆ ಯೋಚನೆ ಶುರುವಾಯ್ತು. ಓದುಬರಹ ತಿಳಿಯದ ಜನಕ್ಕೆ ಕವಿತೆ ಓದಿ ಹೇಳೋರ್ಯಾರು ಅಂತ. ಆಗ ಬೀದಿ ನಾಟಕಗಳ ಚಳವಳಿ ತುಂಬಾ ಇತ್ತು. ನಾನು ಒಂದ್ ತಂಡ ಸೇರ್ಕಂಡು ನಾಟ್ಕ ಮಾಡ್ತ ಹಳ್ಳಿಗಳಿಗೆ ಹೋದಾಗ ಎಲ್ಲರಿಗೂ ಶಿಕ್ಷಣ ಪಡಿಬೇಕು ಅಂತ ಹೇಳೋಕ್ ಶುರುಮಾಡ್ದೆ. ಇಂತ ಘಟನೆಗಳೇ ನನ್ನೊಳಗಿನ ಬರಹಗಾರನನ್ನು ಉಂಟುಮಾಡಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!